ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿ ಇದ್ದಾರೆ : ಮುಖ್ಯಮಂತ್ರಿ ಮಮತಾ
ಪ್ರಧಾನಿಯೊಂದಿಗೆ ಫೋನಿ ಚಂಡಮಾರುತ ಹಾನಿ ಪರಿಶೀಲನಾ ಸಭೆ ನಡೆಸಲು ಮಮತಾ ನಿರಾಕರಣೆ
Team Udayavani, May 6, 2019, 2:52 PM IST
ನವದೆಹಲಿ: ಫೋನಿ ಚಂಡಮಾರುತದ ಹಾನಿ ಪರಿಶೀಲನೆಯ ವಿಚಾರದ ಕುರಿತಾಗಿ ಮಾಹಿತಿ ಪಡೆಯಲು ನಿನ್ನೆಯಷ್ಟೇ ಪ್ರಧಾನಿ ಕಾರ್ಯಾಲಯದ ಸಂಪರ್ಕಕ್ಕೇ ಸಿಗದಿದ್ದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚಂತಮಾರುತ ಹಾನಿ ಪರಿಶೀಲನಾ ಸಭೆ ನಡೆಸುವುದಕ್ಕೆ ನಿರಾಕರಿಸಿದ್ದಾರೆ.
ರಾಜ್ಯ ಸರಕಾರದ ಪ್ರಮುಖ ಅಧಿಕಾರಿಗಳೆಲ್ಲರೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಹನಿ ಪರಿಶೀಲನಾ ಸಭೆಯನ್ನು ನಡೆಸಲು ಸಾಧ್ಯವಿಲ್ಲ ಎಂಬ ಕಾರಣವನ್ನು ಮಮತಾ ಅವರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಒಡಿಸ್ಸಾ ರಾಜ್ಯದಲ್ಲಿ ಚಂತಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಕಷ್ಟ-ನಷ್ಟಗಳ ವಿವರಗಳನ್ನು ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಅಧಿಕಾರಿಗಳಿಂದ ಪಡೆದುಕೊಂಡರು.
ಅದೇ ರೀತಿಯಲ್ಲಿ ಪಶ್ಚಿಮಬಂಗಾಲದಲ್ಲೂ ಇದೇ ರೀತಿಯ ಹಾನಿ ಪರಿಶೀಲನಾ ಸಭೆ ಮತ್ತು ಸಮೀಕ್ಷೆಯನ್ನು ನಡೆಸುವಂತೆ ಪ್ರಧಾನ ಮಂತ್ರಿ ಕಛೇರಿಯು ಪಶ್ಚಿಮ ಬಂಗಾಲ ಸರಕಾರಕ್ಕೆ ಪತ್ರವನ್ನೂ ಬರೆದಿತ್ತು.