ಮರಾಠ ಕ್ರಾಂತಿ ಮೋರ್ಚಾದಿಂದ ಮುಂಬಯಿಯಲ್ಲಿ ಇಂದು ಜೈಲ್ ಭರೋ ಆಂದೋಲನ
Team Udayavani, Aug 1, 2018, 11:15 AM IST
ಮುಂಬಯಿ : ಮರಾಠ ಕ್ರಾಂತಿ ಮೋರ್ಚಾ ಸಂಘಟನೆ ಮುಂಬಯಿಯಲ್ಲಿ ಇಂದು ಜೈಲ್ ಭರೋ ಆಂದೋಲನಕ್ಕೆ ಕರೆ ನೀಡಿದೆ. ಮುಂಬಯಿಯ ಆಜಾದ್ ಮೈದಾನ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.
ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ರಾಜ್ಯ ಸರಕಾರ ಈ ಕೂಡಲೇ ತೆಗೆದುಕೊಳ್ಳಬೇಕು; ಈ ತನಕದ ಮರಾಠ ಪ್ರತಿಭಟನೆಯಲ್ಲಿ ದಾಖಲಾಗಿರುವ ಪ್ರತಿಭಟನಕಾರರ ವಿರುದ್ಧದ ಎಲ್ಲ ಕೇಸುಗಳನ್ನು ಹಿಂಪಡೆಯಬೇಕು, ಜು.25ರ ಪ್ರತಿಭಟನೆಯ ವೇಳೆ ನಡೆದಿದ್ದ ಲಾಠಿ ಚಾರ್ಜ್ ಮತ್ತು ಗೋಲಿಬಾರ್ಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಮರಾಠ ಸಮುದಾಯದವರ ವಿರುದ್ಧ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡಿರುವ ಶಾಸಕರು ಮತ್ತು ಸಚಿವರುಗಳನ್ನು ಉಚ್ಚಾಟನೆ ಮಾಡಬೇಕು ಎಂದು ಮರಾಠ ಕ್ರಾಂತಿ ಮೋರ್ಚಾ ಆಗ್ರಹಸಿದೆ.
ಮೇಲಿನ ಬೇಡಿಕೆಗಳನ್ನು ಮಾತ್ರವಲ್ಲದೆ, ಮರಾಠ ಸಮುದಾಯದವರ ಸಾಲ ಮನ್ನಾ ಮಾಡಬೇಕು, ಕೊಪಾರ್ಡಿ ರೇಪ್ ಕೇಸಿನಲ್ಲಿ ನ್ಯಾಯ ಕೊಡಿಸಬೇಕು, ಸಮುದಾಯದಲ್ಲಿನ ನಿರುದ್ಯೋಗಿಗಳಿಗೆ ಪರಿಹಾರ ನೀಡಬೇಕು ಮತ್ತು ಪ್ರತಿಭಟನೆಯಲ್ಲಿ ಮಡಿದವರ ಕುಟುಂಬದವರಿಗೆ ಮತ್ತು ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡ ಮೋರ್ಚಾ ಆಗ್ರಹಿಸಿದೆ.
ಇಂದು ಬುಧವಾರದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಾಠ ಬೇಡಿಕೆಗಳನ್ನು ಆಗ್ರಹಿಸಿ ಪ್ರಾಣಾರ್ಪಣೆ ಮಾಡಿರುವವರ ಸಂಖ್ಯೆ ಆರಕ್ಕೇರಿದೆ. ನಿನ್ನೆ ಮಂಗಳವಾರ ಓರ್ವ ಕಾರ್ಮಿಕ ಮತ್ತು ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮತ್ತೆ ಮರಾಠ ಪ್ರತಿಭಟನೆ ಭುಗಿಲೆದ್ದಿತ್ತು.