ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ
Team Udayavani, Apr 9, 2020, 5:21 AM IST
ನವದೆಹಲಿ: ನಿಜಾಮುದ್ದೀನ್ ಧಾರ್ಮಿಕ ಸಭೆಯನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಪೊಲೀಸರ ಬಂಧನ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದ ತಬ್ಲೀಘಿ -ಎ-ಜಮಾತ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್ ಅವರ ಸುಳಿವು ಪತ್ತೆಯಾಗಿದೆ. ಹೊಸದಿಲ್ಲಿಯ ಝಾಕಿರ್ ನಗರದ ಮನೆಯೊಂದರಲ್ಲಿ ಅವರು ಸ್ವಯಂ ನಿರ್ಬಂಧಕ್ಕೊಳಗಾಗಿರುವುದು ತಿಳಿದುಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಆದರೆ, ಅವರಿಗೆ ಕೋವಿಡ್ ಸೋಂಕು ಇರುವುದರಿಂದಲೇ ಅವರು ಸ್ವಯಂ ನಿರ್ಬಂಧಕ್ಕೆ ಒಳಗಾಗಿರುವ ಗುಮಾನಿಯೂ ಇರುವುದರಿಂದ ಅವರ ನಿರ್ಬಂಧದ ಅವಧಿ ಮುಕ್ತಾಯವಾದ ಅನಂತರ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ತೀರ್ಮಾನಿಸಿದ್ದಾರೆ. ಇದೇ ವೇಳೆ ಅವರ ವಕೀಲ ಪ್ರತಿಕ್ರಿಯೆ ನೀಡಿ ಸಾದ್ ಶೀಘ್ರವೇ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದಿದ್ದಾರೆ.
24 ಗಂಟೆ ಗಡುವು: ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿ ಬಂದ ಮಧ್ಯಪ್ರದೇಶದ ತಬ್ಲೀಘಿ ಬೆಂಬಲಿಗರು ಇನ್ನು 24 ಗಂಟೆಗಳಲ್ಲಿ ಬಂದು ತಮ್ಮ ಪ್ರಯಾಣದ ವಿವರಣೆಯನ್ನು ಕೊಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.
ಕೋಮು ಪ್ರಶ್ನೆ ಕೇಳಬೇಡಿ: ಕೋಲ್ಕತಾದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಬ್ಲೀಘಿ ಸಮಾವೇಶದಲ್ಲಿ ಭಾಗವಹಿಸಿ ವಾಪಸಾದವರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಕೋಮು ಸಂಬಂಧಿತ ಪ್ರಶ್ನೆ ಕೇಳಬೇಡಿ. ಸದ್ಯ ಉಂಟಾಗಿರುವುದು ರಾಷ್ಟ್ರೀಯ ಸಮಸ್ಯೆ ಎಂದರು.