ಮಾತೃಭಾಷೆಯಲ್ಲೇ ಶಿಕ್ಷಣ ಅತ್ಯಗತ್ಯ: ಎಸ್ಸೆಲ್ ಭೈರಪ್ಪ
Team Udayavani, Feb 22, 2017, 3:45 AM IST
ನವದೆಹಲಿ: ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವುದು ಅಗತ್ಯ. ಇಂಗ್ಲಿಷ್ ಕಲಿಕೆಗೆ ಪ್ರಾಧಾನ್ಯತೆ ನೀಡುವುದರಿಂದ ಮಕ್ಕಳ ಆಲೋಚನೆ ಮತ್ತು ಭಾವನಾ ಶಕ್ತಿಯ ಹತ್ಯೆ ಮಾಡಿದಂತಾಗುತ್ತದೆ ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.
ಪ್ರಾದೇಶಿಕ ಭಾಷೆಗಳಲ್ಲೇ ಮಕ್ಕಳು ಶಿಕ್ಷಣ ಪೂರೈಸಬೇಕು. ಇಂಗ್ಲಿಷ್ ಮೇಲೆ ಸಂಪೂರ್ಣ ನಿಷೇಧ ಬೇಡ. ಆರಂಭದಲ್ಲಿ ಮಾತೃಭಾಷೆಯನ್ನು ಮಕ್ಕಳು ಕಥೆ, ಕವನ, ಗದ್ಯದ ಮೂಲಕ ಕಲಿವಂತಾಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಾಹಿತ್ಯ ಅಕಾಡೆಮಿ ಆಯೋಜಿಸಿರುವ “ಅಕ್ಷರ ಜಾತ್ರೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಭೈರಪ್ಪ ಅವರು ಹೀಗೆ ಹೇಳಿದರು. ಈ ವರ್ಷ ಈ ಕಾರ್ಯಕ್ರಮ ಮಾತೃಭಾಷೆ ಮತ್ತು ಜನಪದ ಸಾಹಿತ್ಯ ಸಂರಕ್ಷಣೆ ಆಶಯವನ್ನು ಹೊಂದಿದೆ. ಕರ್ನಾಟಕದಲ್ಲಿ 1970ರ ವರೆಗೆ ಶೇ.90 ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿಕೆ ಇತ್ತು. ಆದರೆ ಇಂದು ಪ್ರತಿ ನಗರಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದರು.