ಮೇಘಾಲಯ ಗಣಿ ದುರಂತ;ಇಷ್ಟು ದಿನ ಏನ್ ಮಾಡಿದ್ರಿ; ಸರ್ಕಾರಕ್ಕೆ ಸುಪ್ರೀಂ
Team Udayavani, Jan 3, 2019, 10:03 AM IST
ನವದೆಹಲಿ:ಕಳೆದ ಮೂರು ವಾರಗಳ ಹಿಂದೆ ಮೇಘಾಲಯದಲ್ಲಿ ಸಂಭವಿಸಿರುವ ಗಣಿ ದುರಂತದಲ್ಲಿ ಸಿಲುಕಿರುವ 15 ಮಂದಿಯನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಮೇಘಾಲಯ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಗುರುವಾರ ಚಾಟಿ ಬೀಸಿದೆ.
ಗಣಿಯೊಳಗೆ ಸಿಲುಕಿರುವ ಎಲ್ಲರೂ ಜೀವಂತವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಈಗಲಾದರೂ ಅವರನ್ನು ರಕ್ಷಿಸುವ ಕೆಲಸ ಮಾಡಿ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ನಮಗೆ ತೃಪ್ತಿಕರವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಗಣಿಯೊಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಯಾಕೆ ಸಾಧ್ಯವಾಗಿಲ್ಲ ಎಂದು ಜಸ್ಟೀಸ್ ಎಕೆ ಸಿಕ್ರಿ ಮತ್ತು ಜಸ್ಟೀಸ್ ಎಸ್.ಅಬ್ದುಲ್ ನಜೀರ್ ಅವರನ್ನೊಳಗೊಂಡು ಸುಪ್ರೀಂಕೋರ್ಟ್ ಪೀಠ ಮೇಘಾಲಯ ಸರ್ಕಾರವನ್ನು ಪ್ರಶ್ನಿಸಿದೆ. ಇದು ಕಾರ್ಮಿಕರ ಸಾವು ಮತ್ತು ಬದುಕಿನ ಪ್ರಶ್ನೆಯಾಗಿದೆ. ಮೇಘಾಲಯ ಗಣಿಯೊಳಗೆ ಸಿಲುಕಿರುವುದರಿಂದ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಗಣಿ ದುರಂತ:
2018ರ ಡಿಸೆಂಬರ್ 13ರಂದು ಮೇಘಾಲಯದ ಜೈನ್ ಟಿಯಾ ಜಿಲ್ಲೆಯಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯೊಳಗೆ 15 ಮಂದಿ ಕಾರ್ಮಿಕರು ಸಿಲುಕಿದ್ದರು. ಇದು ಸುಮಾರು 370ಕ್ಕೂ ಹೆಚ್ಚು ಆಳ ಹೊಂದಿದೆ. ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಸಮೀಪದ ನದಿಯ ನೀರು ಗಣಿಯ ಒಳಗೆ ಹರಿದ ಪರಿಣಾಮ ಗಣಿಯ ಗೋಡೆ ಕುಸಿದು ಬಿದ್ದು ರಕ್ಷಣಾ ಕಾರ್ಯ ಸ್ಥಗಿತಗೊಳ್ಳುವಂತಾಗಿತ್ತು. ಕಳೆದ ಮೂರು ವಾರಗಳಿಂದ ರಕ್ಷಣಾ ಕಾರ್ಯ ನಡೆಸುತ್ತಿದ್ದರು ಕೂಡಾ ಗಣಿಯೊಳಗೆ ಸಿಲುಕಿದವರ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.