ಸಂಗಮದಲ್ಲಿ ಮಿಂದೆದ್ದ ಕೋಟ್ಯಂತರ ಭಕ್ತರು
Team Udayavani, Mar 5, 2019, 1:00 AM IST
ಪ್ರಯಾಗ್ರಾಜ್: ಸೋಮವಾರ ಸೂರ್ಯಾಸ್ತಕ್ಕೂ ಮೊದಲು ದೇಶದ ಮೂಲೆ ಮೂಲೆಗಳಿಂದ ಕೋಟ್ಯಂತರ ಭಕ್ತರು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಸಂಗಮದತ್ತ ಹರಿದು ಬಂದಿದ್ದು, ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದರು. ಒಂದು ಕೋಟಿಗೂ ಅಧಿಕ ಭಕ್ತರು ಕುಂಭ ಮೇಳದ ಕೊನೆಯ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುವ ಮೂಲಕ, ಒಂದೂವರೆ ತಿಂಗಳ ಕಾಲ ನಡೆದ ವೈಭವದ ಕುಂಭಮೇಳಕ್ಕೆ ತೆರೆಎಳೆದರು.
ಶಿವನ ದಿನವೆಂದೇ ಪರಿಗಣಿ ಸಲ್ಪಡುವ ಸೋಮವಾರವೇ ಈ ವರ್ಷ ಮಹಾಶಿವರಾತ್ರಿ ಬಂದಿ ರುವುದು ವಿಶೇಷವಾಗಿತ್ತು. ರವಿ ವಾರ ರಾತ್ರಿ ವರುಣನ ಸಿಂಚನ ವಾದರೂ, ಅದ್ಯಾವುದನ್ನೂ ಲೆಕ್ಕಿಸದೇ ಸೋಮವಾರ ಸೂರ್ಯೋದಯದ ವೇಳೆ ಗಾಗಲೇ ಭಾರೀ ಸಂಖ್ಯೆಯ ಜನರು ಸಂಗಮದತ್ತ ಧಾವಿಸಿದರು.
ಮಾ. 3ರ ವರೆಗೆ ಒಟ್ಟು 22.95 ಕೋಟಿ ಮಂದಿ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದು, ಸೋಮವಾರ ಮತ್ತೆ ಒಂದು ಕೋಟಿಗೂ ಹೆಚ್ಚು ಮಂದಿ ಶಾಹಿ ಸ್ನಾನ ಮಾಡಿದ್ದಾರೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.