ಬಣ್ಣ ಹಚ್ಚಿದ ಪರಿಸರ ಸಚಿವ
Team Udayavani, Oct 14, 2018, 6:00 AM IST
ನವದೆಹಲಿ: ನವರಾತ್ರಿ ಪ್ರಯುಕ್ತ “ಲವ ಕುಶ ಸಮಿತಿ’ಯು ಕೆಂಪುಕೋಟೆಯ ಮೈದಾನದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ “ರಾಮಲೀಲಾ’ ನಾಟಕದಲ್ಲಿ ಸೀತಾಮಾತೆಯ ತಂದೆ ಜನಕ ಮಹಾರಾಜನ ಪಾತ್ರ ನಿರ್ವಹಿಸಿದ ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ತಮ್ಮಲ್ಲಿನ ಸುಪ್ತ ಪ್ರತಿಭೆಯೊಂದನ್ನು ಅನಾವರಣ ಗೊಳಿಸಿದರು. ಜನಕ ಪಾತ್ರಧಾರಿಯಾಗಿ ಮಹಾರಾಜನ ವಸ್ತ್ರಾಭರಣದ ಜತೆ ಮುಖದ ಮೇಲೆ ದಪ್ಪನೆಯ ಮೀಸೆ, ಕಿರೀಟ, ಧರಿಸಿ ಠೀವಿಯಿಂದ ವೇದಿಕೆಗೆ ಆಗಮಿಸಿದ ಸಚಿವ ಹರ್ಷವರ್ಧನ್ ಅವರು ಗುರುತು ಸಿಗದಂತಾಗಿದ್ದರು.
ನಟರಾಗಿ ಅವರು ಲೀಲಾಜಾಲವಾಗಿ ನಟಿಸಿದರೂ, ಅವರಲ್ಲಿದ್ದ ಪರಿಸರ ಸಚಿವ ಜಾಗೃತನಾಗಿದ್ದ. ದೃಶ್ಯವೊಂದರಲ್ಲಿ ಶ್ರರಾಮನೊಂದಿಗೆ ಸಂಭಾಷಿಸುವಾಗ, “”ರಾಮ, ನೀನು ನೈಸರ್ಗಿಕ ಪರಿಸರದಲ್ಲಿ ಜೀವಿಸಲು ಇಷ್ಟಪಡುವೆ ಎಂಬುದನ್ನು ನಾನು ಬಲ್ಲೆ. ಉಸಿರಾಡುವ ಗಾಳಿ ಶುದ್ಧವಾಗಿದ್ದರೆ ಅದು ಆರೋಗ್ಯಕರ ಜೀವನಕ್ಕೆ ನಾಂದಿಯಾಗುತ್ತದೆ” ಎಂದು ಅವರು ಹೇಳಿದ್ದು ಅದಕ್ಕೆ ಸಾಕ್ಷಿಯಾಗಿತ್ತು.