ಕಾಶ್ಮೀರ ಪ್ರಶ್ನೆ: ವಾಜಪೇಯಿ ಸೂತ್ರಕ್ಕೆ ಮೀರ್ವೇಜ್ ಒಲವು
Team Udayavani, Sep 25, 2017, 3:46 PM IST
ಶ್ರೀನಗರ : ”ಕಾಶ್ಮೀರ ವಿವಾದ ಕುರಿತಾಗಿ ಕೇಂದ್ರ ಸರಕಾರದೊಂದಿಗೆ ನಿಶ್ಶರ್ತ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ; ಆದರೆ ಈ ವಿಷಯದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಬೇಕಾದರೆ 2000 ಇಸವಿಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರಕಟಿಸಿದ್ದ ಸೂತ್ರಗಳನ್ನು ಅನುಸರಿಸುವುದು ಒಳಿತೆಂದು ನಾನು ಭಾವಿಸುತ್ತೇನೆ” ಎಂಬುದಾಗಿ ಸೌಮ್ಯವಾದಿ ಕಾಶ್ಮೀರೀ ಪ್ರತ್ಯೇಕತಾ ನಾಯಕ ಮೀರ್ವೇಜ್ ಉಮರ್ ಫಾರೂಕ್ ಹೇಲಿದ್ದಾರೆ.
‘ಕಾಶ್ಮೀರ ವಿವಾದವನ್ನು ಬಗೆ ಹರಿಸಲು ಎಲ್ಲ ಪಕ್ಷಗಳನ್ನು ಒಳಗೊಳಿಸುವುದು ಒಳ್ಳೆಯದೆಂಬುದು ವಾಜಪೇಯಿ ಅವರ ಸೂತ್ರವಾಗಿತ್ತು. ಆ ಪ್ರಕಾರ ಎಲ್ಲ ಕಾಶ್ಮೀರಿ ಪ್ರತ್ಯೇಕತಾ ನಾಯಕರಿಗೆ ಭಾರತದಲ್ಲಿನ ಕೇಂದ್ರ ಸರಕಾರದೊಂದಿಗೆ ಮತ್ತು ಇಸ್ಲಾಮಾಬಾದ್ನಲ್ಲಿನ ಸರಕಾರದೊಂದಿಗೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಸಮಾನರೊಂದಿಗೆ ಏಕಕಾಲದಲ್ಲಿ ಸಂಪರ್ಕ – ಸಂವಹನವನ್ನು ಏರ್ಪಡಿಸಿ ಮಾತುಕತೆಗೆ ಅವಕಾಶ ಕಲ್ಪಿಸಬೇಕಾಗುವುದು’ ಕಾಶ್ಮೀರಿಗಳ ಧಾರ್ಮಿಕ ನಾಯಕರಾಗಿರುವ ಮೀರ್ವೇಜ್ ಫಾರೂಕ್ ಅಭಿಪ್ರಾಯಪಟ್ಟರು.
44ರ ಹರೆಯದ ಮೀರ್ವೇಜ್ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು “ಎಲ್ಲರನ್ನೂ ಒಳಗೊಳಿಸಿ ಮಾತುಕತೆ ನಡೆಸುವ’ ಸಲಹೆಯನ್ನು ಸ್ವಾಗತಿಸಿದರು. ಆದರೆ ಮೀರ್ವೇಜ್ ಅವರು ಇದೇ ಮೊದಲ ಬಾರಿಗೆ, 70 ವರ್ಷಗಳಷ್ಟು ಹಳೆಯ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಡೆಯಬೇಕಿರುವ “ಎಲ್ಲರನ್ನೂ ಒಳಗೊಳಿಸುವ ಮಾತಕತೆ’ಯಲ್ಲಿ ಯಾರು ಯಾರು ಇರಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.