ಆರ್.ಬಿ.ಐ. ಜೊತೆ ಭಿನ್ನ ಅಭಿಪ್ರಾಯವಿತ್ತು: ಜೇಟ್ಲಿ
Team Udayavani, Dec 14, 2018, 9:45 AM IST
ಮುಂಬಯಿ: ಆರ್ಬಿಐ ಹಾಗೂ ಸರಕಾರದ ಮಧ್ಯೆ 2-3 ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ನಂತರದಲ್ಲಿ ಜೇಟ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಆದರೆ ಕೆಲವು ವಿಷಯಗಳ ಬಗ್ಗೆ ಚರ್ಚೆಯನ್ನೇ ಆರ್ಬಿಐ ಕಾರ್ಯನಿರ್ವಹಣೆಗೆ ಅಡ್ಡಿ ಎಂದು ಬಿಂಬಿಸುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಹಲವು ಬಾರಿ ಆರ್.ಬಿ.ಐ. ಗವರ್ನರ್ಗಳಿಗೆ ರಾಜೀನಾಮೆ ನೀಡುವಂತೆ ಜವಾಹರಲಾಲ ನೆಹರು ಮತ್ತು ಇಂದಿರಾ ಗಾಂಧಿ ಸೂಚಿಸಿದ್ದರು ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.
ಹಣಕಾಸು ಹರಿವು ಮತ್ತು ದ್ರವ್ಯತೆಯ ಬೆಂಬಲದ ವಿಚಾರದಲ್ಲಿ ಸರಕಾರ ಹಾಗೂ ಆರ್.ಬಿ.ಐ. ಮಧ್ಯೆ ಭಿನ್ನಾಭಿಪ್ರಾಯವಿತ್ತು. ಈ ಕುರಿತು ಆರ್.ಬಿ.ಐ. ಜೊತೆಗೆ ಸರಕಾರ ಚರ್ಚೆ ನಡೆಸಿತ್ತು. ಹಣದ ಹರಿವು ಮತ್ತು ದ್ರವ್ಯತೆ ಹೆಚ್ಚಿಸುವುದು ಆರ್.ಬಿ.ಐ.ನ ಕರ್ತವ್ಯ ಎಂದು ಎಚ್ಚರಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಜೇಟ್ಲಿ ಹೇಳಿದ್ದಾರೆ. ಊರ್ಜಿತ್ ರಾಜೀನಾಮೆಗೆ ಸರಕಾರದೊಂದಿಗಿನ ಜಟಾಪಟಿಯೇ ಕಾರಣ ಎನ್ನಲಾಗಿತ್ತು.