ಸಕಾಲಕ್ಕೇ ಮುಂಗಾರು ಅಧಿವೇಶನ ; ಸೋಂಕಿನ ಹಿನ್ನೆಲೆಯಲ್ಲಿ ಎದ್ದಿರುವ ಆತಂಕಗಳಿಗೆ ಸ್ಪಷ್ಟನೆ
Team Udayavani, May 11, 2020, 11:10 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್ ಸೋಂಕಿನ ಆತಂಕದ ನಡುವೆಯೂ ಸಂಸತ್ತಿನ ಮುಂಗಾರು ಅಧಿವೇಶನ ನಡೆಸುವ ವಿಶ್ವಾಸವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವ್ಯಕ್ತಪಡಿಸಿದ್ದಾರೆ.
ಸಾಧಾರಣವಾಗಿ ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಸಂಸತ್ನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತದೆ. ಕಳೆದ ವರ್ಷ ಜೂನ್ 20ರಿಂದ ಆಗಸ್ಟ್ 7ರವರೆಗೆ ಮುಂಗಾರು ಅಧಿವೇಶನ ನಡೆದಿತ್ತು.
ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಂಸತ್ನ ಮುಂಗಾರು ಅಧಿವೇಶನ ಆರಂಭವಾಗುವುದು ವಿಳಂಬವಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂಕಷ್ಟ ನಮಗೆ ಪರೀಕ್ಷೆಯ ಕಾಲ. ಆದರೂ ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ಅಧಿವೇಶನವನ್ನು ನಡೆಸಬಹುದು ಎಂದು ಅಂದುಕೊಂಡಿದ್ದೇನೆ. ಆದಾಗ್ಯೂ ಅಧಿವೇಶನದ ಆರಂಭ ಅಂದಿನ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದರು.
ಜೂನ್ – ಜುಲೈ ತಿಂಗಳಲ್ಲಿಯೂ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಜಾರಿಯಲ್ಲಿದ್ದರೆ ಅಧಿವೇಶನ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಂತಹ ಪರಿಸ್ಥಿತಿ ಬಂದರೆ, ಮಾರ್ಗವೊಂದನ್ನು ಕಂಡು ಹಿಡಿಯಬಹುದು ಎಂದರು.
ಆಸನ ಕೊರತೆ: ದೇಶದ ಅತಿ ದೊಡ್ಡ ವಿಧಾನಸಭೆ ಎನಿಸಿರುವ ಉತ್ತರ ಪ್ರದೇಶದಲ್ಲಿ ಈಗ ಅಧಿವೇಶನ ನಡೆಸಿ, ಸಭಾಂಗಣದಲ್ಲಿ ಸಾಮಾಜಿಕ ಅಂತರ ನಿಯಮ ಪಾಲಿಸಿದರೆ 403ರ ಪೈಕಿ 200 ಸದಸ್ಯರಿಗೆ ಮಾತ್ರ ಆಸನಗಳು ಸಿಗಲಿವೆ ಎಂದು ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಹೇಳಿದ್ದಾರೆ.
ಈಗಾಗಲೇ ವಿಧಾನಸಭೆ ಸಭಾಂಗಣದಲ್ಲಿ 10-12 ಆಸನಗಳ ಕೊರತೆ ಇದೆ. ಈ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸುವುದು ಕಷ್ಟ ಎಂದು ದೀಕ್ಷಿತ್ ಹೇಳಿದ್ದಾರೆ.