ಮುಂಬೈ ಮಳೆ: ಮಕ್ಕಳ ದುರ್ಮರಣ
Team Udayavani, Sep 7, 2019, 5:06 AM IST
ಮುಂಬೈ/ಕೊಯಮತ್ತೂರು: ಮಧ್ಯಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಶುಕ್ರವಾರ ಜಬುವಾ ಜಿಲ್ಲೆಯಲ್ಲಿ ಮನೆಯೊಂದರ ಗೋಡೆ ಕುಸಿದು, ಪೀಕು ಹೆಸರಿನ 11 ತಿಂಗಳ ಕೂಸು ಹಾಗೂ 7 ವರ್ಷದ ಬಾಲಕಿ ಪಾಯಲ್ ಮೃತಪಟ್ಟಿದ್ದಾರೆ. ಭಾರೀ ಮಳೆಯಾದ ಕಾರಣ, ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಳೆಯಿಂದಾಗಿ ಸ್ಥಳೀಯ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ, ಕೊಂಕಣ ಕರಾವಳಿ ಮತ್ತು ಗೋವಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನಾಲ್ವರ ಸಾವು: ಛತ್ತೀಸ್ಗಡದಲ್ಲೂ ವರುಣನ ಅಬ್ಬರ ತೀವ್ರಗೊಂಡಿದ್ದು, ಶುಕ್ರವಾರ ವಿವಿಧ ಪ್ರದೇಶಗಳಲ್ಲಿ ನಡೆದ 3 ಪ್ರತ್ಯೇಕ ಗೋಡೆ ಕುಸಿತ ಪ್ರಕರಣಗಳಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.
ತಮಿಳುನಾಡಿಗೆ ಪ್ರವಾಹ ಭೀತಿ: ಸೇಲಂ ಜಿಲ್ಲೆಯ ಮೆಟ್ಟೂರು ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿರುವ ಕಾರಣ, ಕಾವೇರಿ ನದಿಯ ನೀರು ಹರಿಯುವಂಥ ತಮಿಳು ನಾಡಿನ 12 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಕಾವೇರಿ ತಟದಲ್ಲಿ ವಾಸಿಸು ತ್ತಿರುವ ಮತ್ತು ತಗ್ಗುಪ್ರದೇಶಗಳಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗುವಂತೆಯೂ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.