ಭಾರೀ ಮಳೆಗೆ ಮುಂಬಯಿ ತತ್ತರ : ಒಂದೇ ದಿನ 19 ಮಂದಿ ಬಲಿ
ಸರ್ಕಾರಿ ರಜೆ ಘೋಷಣೆ, ಜನಜೀವನ ಸಂಪೂರ್ಣ ಅಸ್ತವ್ಯಸ್ತ
Team Udayavani, Jul 2, 2019, 9:09 AM IST
ಮುಂಬಯಿ: ನಗರ ಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು ಒಂದೇ ದಿನ 19 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ರಾತ್ರಿ ಮಲಾಡ್ನಲ್ಲಿ ಗೋಡೆ ಕುಸಿದು 16 ಮಂದಿ, ಕಲ್ಯಾಣ್ನಲ್ಲಿ ಗೋಡೆ ಕುಸಿದು 3 ಮಂದಿ ಸಾವನ್ನಪ್ಪಿದ್ದಾರೆ.
ನಗರದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ವಿಮಾನ ಸೇವೆ ಮತ್ತು ರೈಲು ಸೇವೆ ಸಂಪೂರ್ಣವಾಗಿ ಬಾಧಿತವಾಗಿದೆ. ಹಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ.
ಮಲಾಡ್ನ ಪೂರ್ವದ ಕುರಾರ್ನಲ್ಲಿ ಗುಡಿಸಲುಗಳ ಗೋಡೆ ಕುಸಿದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘೋಷಿಸಿದ್ದಾರೆ.
ಕಲ್ಯಾಣ್ನಲ್ಲಿ ನ್ಯಾಷನಲ್ ಉರ್ದು ಶಾಲೆ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ತುರ್ತು ಕಾರ್ಯಾಚರಣೆಗೆ ಬಿಎಂಸಿ ತಂಡಗಳು, ಎನ್ಡಿಆರ್ಎಫ್ , ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಸಿಬಂದಿಗಳು ಸಿದ್ಧರಾಗಿದ್ದಾರೆ.
ಮಂಗಳವಾರ ಎಲ್ಲಾ ಶಾಲಾ, ಕಾಲೇಜುಗಳು ಸರ್ಕಾರಿ ಕಚೇರಿಗಳಿಗೆ ರಜೆ ಸಾರಲಾಗಿದೆ.
ಮಳೆ ಮುಂದುವರಿದಿದ್ದು, ನಗರವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಜಲಾವೃತಗೊಂಡಿರುವ ತಗ್ಗು ಪ್ರದೇಶಗಳಲ್ಲಿರುವ 1,000 ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.