ಇದೆಂಥಾ ಪ್ರಶ್ನೆ: ಕೆಲಸ ಪಡೆಯೋಕೂ ಕನ್ಯತ್ವ ಖಾತ್ರಿ!
Team Udayavani, Aug 3, 2017, 9:05 AM IST
ಪಟ್ನಾ: ನಿಮಗೆ ಈ ಆಸ್ಪತ್ರೆಯಲ್ಲಿ ಕೆಲಸ ಬೇಕೆಂದರೆ ನೀವಿನ್ನೂ ‘ಬ್ರಹ್ಮಚಾರಿ ಅಥವಾ ಕನ್ಯೆ’ಯಾಗಿದ್ದೀರ ಎಂದು ಖಚಿತಪಡಿಸಬೇಕು! ಅಯ್ಯೋ… ಇದ್ಯಾವ ಹೊಸ ಅರ್ಹತೆ ಅಂತ ಅಚ್ಚರಿ ಪಡಬೇಡಿ. ಏಕೆಂದರೆ ಬಿಹಾರದ ಸರಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರುವವರು ತಮ್ಮ ಬ್ರಹ್ಮಚರ್ಯ ಅಥವಾ ಕನ್ಯತ್ವವನ್ನು ಅರ್ಜಿಯಲ್ಲಿ ಖಚಿತಪಡಿಸುವುದು ಕಡ್ಡಾಯ!
ಪಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಈ ಅತಿರೇಕದ ಕ್ರಮದ ಬಗ್ಗೆ ಮಹಿಳಾ ಸಂಘಟನೆಯೊಂದು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ಕುರಿತು ಕೇಂದ್ರ ಸರಕಾರದಿಂದ ಬಂದ ಸೂಚನೆಯನ್ನು ತಾವು ಪಾಲಿಸುತ್ತಿರುವುದಾಗಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಮನೀಶ್ ಮಂಡಲ್ ಹೇಳಿದ್ದಾರೆ. ಹಾಗೇ ‘ಈ ರೀತಿಯ ತೀರಾ ಖಾಸಗಿ ಮಾಹಿತಿ ಕೇಳಿದಾಗ ಆಭ್ಯರ್ಥಿಗಳು ಮುಜುಗರಕ್ಕೆ ಒಳಗಾಗುತ್ತಾರೆ’ ಎಂಬುದನ್ನು ಒಪ್ಪುವ ಮಂಡಲ್, ‘ಒಂದೊಮ್ಮೆ ಭವಿಷ್ಯದಲ್ಲಿ ಮಹಿಳಾ ಸಿಬಂದಿ ಮೇಲೆ ಅತ್ಯಾಚಾರ ನಡೆದರೆ, ಅದನ್ನು ಸಾಬೀತುಪಡಿಸಲು, ಅವರು ಆರಂಭದಲ್ಲಿ ನೀಡಿದ ಈ ಖಾಸಗಿ ಮಾಹಿತಿ ನೆರವಿಗೆ ಬರುತ್ತದೆ’ ಎಂದು ಕೂಡ ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಅಭ್ಯರ್ಥಿ ಕೆಲಸಕ್ಕೆ ಸೇರಿದ ಕೆಲವೇ ದಿನದಲ್ಲಿ ವಿವಾಹವಾಗಿ, ನಂತರ ಅವರ ಮೇಲೆ ಅತ್ಯಾಚಾರ ನಡೆದರೆ ಏನು ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಅರ್ಜಿಯಲ್ಲಿನ ಅಂಶಗಳು
1. ನಾನು ಅವಿವಾಹಿತ/ತೆ/ವಿಧುರ/ಕನ್ಯೆ/ಬ್ರಹ್ಮಚಾರಿ
2. ನಾನು ವಿವಾಹಿತ ಮತ್ತು ಒಬ್ಬಳೇ ಪತ್ನಿಯನ್ನು ಹೊಂದಿದ್ದೇನೆ
3. ನಾನು ವಿವಾಹವಾಗಿರುವ ವ್ಯಕ್ತಿಗೆ ಮತ್ತೂಬ್ಬ ಜೀವಂತ ಪತ್ನಿ ಅಥವಾ ಪತಿ ಇಲ್ಲ