ಕಾರ್ಬೆಟ್ ಕಾನನದಲ್ಲಿ ಮೋದಿ “ಪಿಸುಮಾತು”
ಬೆಳೆದು ಬಂದ ಕಥೆಗೆ ಸಾಹಸದ ಜೊತೆ
Team Udayavani, Aug 13, 2019, 6:00 AM IST
ನವದೆಹಲಿ: ಹಿಮಾಲಯದ ತಪ್ಪಲಿನಲ್ಲಿರುವ ಜಿಮ್ ಕಾರ್ಬೆಟ್ ದಟ್ಟ ಅರಣ್ಯದಲ್ಲಿ ನದಿ ತಣ್ಣಗೆ ಹರಿಯುತಿತ್ತು; ಬಂಗಾಳದ ಹುಲಿಗಳು ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿದ್ದರೆ, ಕಾಡೆಮ್ಮೆಗಳು, ಜಿಂಕೆಗಳು ನಿರ್ಭಿಡೆಯಿಂದ ಹೆಜ್ಜೆಯಿಕ್ಕುತ್ತಿದ್ದವು. ಈ ಕಾಡಿನಲ್ಲಿ ಅವತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಸಂಚರಿಸುತ್ತಿದ್ದಾರೆ ಎನ್ನುವುದು ಅವಕ್ಕೆಲ್ಲಿ ತಿಳಿಯಬೇಕು?
ಡಿಸ್ಕವರಿ ಚಾನೆಲ್ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ನಿರೂಪಕ ಬೇರ್ ಗ್ರಿಲ್ಸ್ ಜತೆ ಹೆಜ್ಜೆ ಹಾಕುತ್ತಿರುವ ಮೋದಿ ಪ್ರಕೃತಿಯ ಜತೆಗಿನ ತಮ್ಮ ಅನುಭವ, ಅನುಭಾವವನ್ನು ಬಿಚ್ಚಿಡುತ್ತಿದ್ದರಲ್ಲದೆ, ನಿಸರ್ಗ ರಕ್ಷಣೆಯ ತಮ್ಮ ಕನಸನ್ನೂ ಹರವಿಡುತ್ತಿದ್ದರು.
”ನಿಸರ್ಗವನ್ನು ನಾವು ಪ್ರೀತಿಸಬೇಕು. ಈ ನಿಸರ್ಗವನ್ನು ಹೀಗೆ ಮಾಡಿಟ್ಟಿದ್ದೀರಲ್ಲಾ ಎಂದು ಮುಂದಿನ 50 ವರ್ಷಗಳಲ್ಲಿ ಜನಿಸುವ ವ್ಯಕ್ತಿ ನಮ್ಮನ್ನು ಕೇಳುವಂತೆ ಮಾಡಬಾರದು” ಎಂದು ಪ್ರಧಾನಿ ಹೇಳಿದರು. ಈ ಕಾರ್ಯಕ್ರಮ ಸೋಮವಾರ ರಾತ್ರಿ ಪ್ರಸಾರವಾಯಿತು.
ಬಹುನಿರೀಕ್ಷಿತ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಬೇರ್ ಗ್ರಿಲ್ಸ್ ಕಾಪ್ಟರ್ನಲ್ಲಿ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ತಲುಪಿದರು. ಅಲ್ಲಿ ಮಧ್ಯ ದಾರಿಯೊಂದರಲ್ಲಿ ಬೇರ್ ಗ್ರಿಲ್ಸ್ ನಿಂತು, ಮೋದಿಗಾಗಿ ಕಾದಿದ್ದರು. ಅಲ್ಲಿಗೆ ಬೆಂಗಾವಲು ಪಡೆಯೊಂದಿಗೆ ಬಂದ ಮೋದಿ, ಬೆಂಗಾವಲು ಪಡೆಯನ್ನು ಅಲ್ಲೇ ಬಿಟ್ಟು, ಬೇರ್ ಜೊತೆಗೆ ನಡೆದುಕೊಂಡೇ ತೆರಳಿದರು. ನಡೆಯುತ್ತಾ ತಾನು ಬೆಳೆದುಬಂದ ಕತೆಯನ್ನೂ ಹೇಳಿದರು. ನಡೆದು ಹೋಗುತ್ತಿದ್ದಾಗ ಆನೆ ಲದ್ದಿಯನ್ನು ನೋಡಿ ಬೇರ್ಗೆ ತೋರಿಸಿದಾಗ, ಬೇರ್ ಆ ಲದ್ದಿಯನ್ನು ಎತ್ತಿ ಮೂಸಿ ನೋಡಿ, ಈಗಷ್ಟೇ ಆನೆ ಹಾದು ಹೋಗಿದೆ ಎಂದರು. ಅಷ್ಟೇ ಅಲ್ಲ, ಮೋದಿ ಕೂಡ ಅದನ್ನು ಮೂಸಿ ನೋಡಿದರು.
ತಾನು ಬಾಲ್ಯದಲ್ಲಿ ಹೇಗೆ ಬೆಳೆದೆ ಎಂಬ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಸಾಬೂನು ಖರೀದಿ ಮಾಡಲು ನಮ್ಮ ಬಳಿ ಹಣವಿಲ್ಲದ್ದರಿಂದ ಮಣ್ಣನ್ನೇ ಸಾಬೂನಿನ ರೀತಿ ಬಳಸುತ್ತಿದ್ದೆವು. ನುಣುಪು ಮಣ್ಣನ್ನು ತೆಗೆದು ಅದನ್ನೇ ಮೈಗೆ ಬಳಿದುಕೊಂಡು ಸ್ನಾನ ಮಾಡುತ್ತಿದ್ದೆವು ಎಂದರು.
ನೀವು ಇಷ್ಟೊಂದು ನೀಟಾಗಿ ಡ್ರೆಸ್ ಹಾಕುತ್ತೀರಲ್ಲವೇ ಎಂದು ಕೇಳಿದ ಬೇರ್, ಬಾಲ್ಯದ ನೆನಪನ್ನು ಕೆದಕಿದರು. ”ಎಳವೆಯಲ್ಲಿ ನೀಟಾಗಿ ಕಾಣುವುದಕ್ಕಾಗಿ ತಾನು ಬಟ್ಟೆಯನ್ನು ಇಸ್ತ್ರಿ ಮಾಡಲು ಕಲ್ಲಿದ್ದಲನ್ನು ಬಳಸುತ್ತಿದ್ದೆ. ಕಲ್ಲಿದ್ದಲನ್ನು ಉರಿಸಿ ಪಾತ್ರೆಯಲ್ಲಿ ಹಾಕಿ ಅದನ್ನೇ ಬಟ್ಟೆಗೆ ಉಜ್ಜುತ್ತಿದೆ. ಅಷ್ಟೇ ಅಲ್ಲ, ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ ಕಥೆಯನ್ನೂ ಅವರು ಈ ವೇಳೆ ಬೇರ್ಗ್ರಿಲ್ಸ್ಗೆ ಹೇಳಿದರು.
ಹುಲಿಯಿಂದ ರಕ್ಷಣೆಗೆ ಮೋದಿ ಹಾಗೂ ಬೇರ್ ಭರ್ಜಿಯನ್ನೂ ತಯಾರಿಸಿದರು. ಈ ವೇಳೆ ಮನೆ ತೊರೆದು ಹಿಮಾಲಯಕ್ಕೆ ತೆರಳಿದ ಬಗ್ಗೆಯೂ ಬೇರ್ ಬಳಿ ಹೇಳಿಕೊಂಡರು. ಅದೊಂದು ವಿಶೇಷ ಅನುಭವವಾಗಿತ್ತು. ಇಂದಿಗೂ ನನ್ನಲ್ಲಿ ಆ ಶಕ್ತಿ ಇದೆ ಎಂದರು. ಭರ್ಚಿಯನ್ನು ಇರಿದು ಪ್ರಾಣಿಯನ್ನು ಕೊಲ್ಲುವುದು ನನ್ನ ಸಂಸ್ಕಾರವಲ್ಲ. ಆದರೆ ನೀವು ಹೇಳಿದ್ದೀರಿ ಎಂದ ಮಾತ್ರಕ್ಕೆ ನಾನು ಹಿಡಿದುಕೊಳ್ಳುತ್ತೇನೆ ಎಂದು ಬೇರ್ಗೆ ಮೋದಿ ಹೇಳಿದರು. ಇಬ್ಬರೂ ಅಲ್ಲಿದ್ದ ನದಿಯನ್ನು ತಲುಪಿ, ಅದರ ದಂಡೆಯ ಮೇಲೆ ನಡೆದರು. ಈ ಸಮಯವನ್ನು ನಾನು ರಜೆ ಎಂದುಕೊಂಡರೆ, 18 ವರ್ಷಗಳಲ್ಲಿ ಮೊದಲ ಬಾರಿ ರಜೆ ತೆಗೆದುಕೊಂಡಿದ್ದೇನೆ ಎಂದ ಅವರು, ಅಲ್ಲೇ ನಿಂತು ತನ್ನ ತಾಯಿಯನ್ನು ನೆನಪಿಸಿಕೊಂಡರು. ಇಂದಿಗೂ ನನ್ನನ್ನು ಮಗುವಿನಂತೆಯೇ ಆಕೆ ನೋಡುತ್ತಾಳೆ ಎಂದರು. ಸಣ್ಣವನಿದ್ದಾಗ ಮನೆಯಲ್ಲಿ ಸ್ನಾನದ ಮನೆ ಇಲ್ಲದ್ದರಿಂದ ಕೊಳದಲ್ಲಿ ಸ್ನಾನ ಮಾಡುತ್ತಿದ್ದೆ. ಒಂದು ದಿನ ಸ್ನಾನ ಮಾಡುತ್ತಿದ್ದಾಗ ಮೊಸಳೆಯ ಮರಿ ಕಂಡು, ಅದನ್ನು ಹಿಡಿದುಕೊಂಡು ಮನೆಗೆ ಬಂದಿದ್ದೆ. ಆದರೆ ಹಾಗೆ ಮಾಡುವುದು ಪಾಪ, ಅದಕ್ಕೂ ಜೀವವಿರುತ್ತದೆ ಎಂದು ಅಮ್ಮ ಹೇಳಿದ್ದರಿಂದ ಅದನ್ನು ವಾಪಸ್ ಕೊಳದಲ್ಲಿ ಬಿಟ್ಟೆ ಎಂದು ಮೋದಿ ಹೇಳಿದರು. ನಾವು ನಿಸರ್ಗಕ್ಕೆ ಹೆದರಬಾರದು. ನನ್ನ ತಂದೆ ಪ್ರತಿ ಬಾರಿ ಮಳೆ ಆರಂಭವಾದಾಗ ಸಂಬಂಧಿಕರಿಗೆ ಪೋಸ್ಟ್ ಕಾರ್ಡ್ನಲ್ಲಿ ಬರೆದು ಸಂಭ್ರಮವನ್ನು ಹೇಳಿಕೊಳ್ಳುತ್ತಿದ್ದರು. ಅದು ಆಗ ನಮಗೆ ಅಚ್ಚರಿ ಎನಿಸುತ್ತಿತ್ತು. ಆದರೆ ಈಗ ನಿಸರ್ಗವನ್ನು ಅವರು ಪ್ರೀತಿಸುತ್ತಿದ್ದ ರೀತಿಯನ್ನು ಅದು ತಿಳಿಸುತ್ತಿದೆ ಎಂದರು. ನಿಸರ್ಗದ ಬಗ್ಗೆ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಪ್ರೀತಿ ಇತ್ತು. ನನ್ನ ಚಿಕ್ಕಪ್ಪ ಮರದ ಉರುವಲು ಮಾರಾಟದ ವ್ಯಾಪಾರ ನಡೆಸಲು ನಿರ್ಧರಿಸಿದ್ದರು, ಆದರೆ ಮರವನ್ನು ಕಡಿದು ಮಾರುವುದಕ್ಕೆ ಅಜ್ಜಿ ಬಿಡಲಿಲ್ಲ ಎಂದರು.
ಮೊದಲನೇ ದಿನವೇ ಬೇರ್, ಬಳ್ಳಿಗಳಿಂದ ಮಾಡಿಟ್ಟಿದ್ದ ತೆಪ್ಪವನ್ನು ಇಬ್ಬರೂ ಸೇರಿ ಎಳೆದು ನದಿಗೆ ಬಿಟ್ಟರು. ನಂತರ ಅದರಲ್ಲಿ ಇಬ್ಬರೂ ಕುಳಿತುಕೊಂಡು ನದಿಯ ಇನ್ನೊಂದು ಬದಿಗೆ ತೆರಳಿದರು. ಇಂಥ ತೆಪ್ಪದಲ್ಲಿ ನದಿಯನ್ನು ದಾಟಿದ ಪ್ರಧಾನಿ ಇತಿಹಾಸದಲ್ಲಿ ನೀವೊಬ್ಬರೇ ಇರಬೇಕು ಎಂದು ಬೇರ್ ಹೇಳಿದ್ದಕ್ಕೆ, ಇದೇನೂ ಹೊಸದು ಎನಿಸುವುದಿಲ್ಲ. ನಾನು ಈ ರೀತಿಯೇ ಬೆಳೆದಿದ್ದೇನೆ ಎಂದು ಮೋದಿ ಹೇಳಿದರು.
ಕಾರ್ಯಕ್ರಮದ ಕೊನೆಯ ಚರಣದಲ್ಲಿ ನದಿಯ ಇನ್ನೊಂದು ಭಾಗದಲ್ಲಿ ಬಂದು ಕುಳಿತು, ಚಹಾ ಸೇವಿಸುತ್ತಾ ಇಬ್ಬರೂ ಮಾತನಾಡಿದರು. ಈ ವೇಳೆ ತುಳಸಿಯ ಮಹತ್ವವನ್ನೂ ಬೇರ್ಗೆ ಮೋದಿ ಹೇಳಿದರು. ಭಾರತವನ್ನು ಸ್ವಚ್ಛಗೊಳಿಸುವ ಕುರಿತು ಮಾತನಾಡಿದರು. ಭಾರತೀಯರಿಗೆ ವೈಯಕ್ತಿಕ ಸ್ವಚ್ಛತೆ ತಿಳಿದಿದೆ. ಆದರೆ ಸಾಮಾಜಿಕ ಸ್ವಚ್ಛತೆ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂದರು. ಕನ್ನಡದಲ್ಲೂ ಕಾರ್ಯಕ್ರಮದ ಧ್ವನಿ ಪ್ರಸಾರವಾಯಿತು. ಮೋದಿ ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ಬೇರ್ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ಇಬ್ಬರ ಮಧ್ಯೆ ಯಾವುದೇ ದುಭಾಷಿಗಳು ಇರಲಿಲ್ಲ.
ಈ ಕಾರ್ಯಕ್ರಮ ನನಗೆ ಹೊಸ ರೋಮಾಂಚಕ ಅನುಭವ ನೀಡಿದೆ. ನನಗೆ ನನ್ನ ಹಿಮಾಲಯದ ನೆನಪುಗಳ ಸುರುಳಿ ಬಿಚ್ಚಿತು. ನದಿ, ಕೊಳ, ಕಾಡು, ಧ್ಯಾನ… ಎಲ್ಲವೂ ನೆನಪಾದವು.
ಪ್ರಧಾನಿ ಮೋದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ