ಬೆರ್ಚಪ್ಪಗಳ ಮೂಲಕ ಯಾಮಾರಿಸುವ ನಕ್ಸಲರು!
Team Udayavani, Dec 2, 2018, 6:00 AM IST
ರಾಯಪುರ: ಛತ್ತೀಸ್ಗಢದಲ್ಲಿ ಪೊಲೀಸರನ್ನು ಯಾಮಾರಿಸಲು ನಕ್ಸಲರು ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಮನುಷ್ಯರಂತೆಯೇ ಕಾಣುವ ಬೆರ್ಚಪ್ಪ(ಬೆದರು ಬೊಂಬೆ)ಗಳನ್ನು ನಿಲ್ಲಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪೊಲೀಸರು ನಡೆಸಿದ ತುರುಸಿನ ಕಾರ್ಯಾಚರಣೆಯಲ್ಲಿ ನಕ್ಸಲರು ಭಾರಿ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ನಕ್ಸಲರು ಈ ಹೊಸ ತಂತ್ರಗಳನ್ನು ಕಂಡು ಕೊಂಡಿದ್ದಾರೆ.
ವಿಯೆಟ್ನಾಂನಲ್ಲಿ ಗೆರಿಲ್ಲಾ ಯುದ್ಧದಲ್ಲೂ ಇದೇ ರೀತಿಯ ತಂತ್ರಗಳನ್ನು ಬಳಸಲಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಇಂತಹ 13 ಬೆರ್ಚಪ್ಪಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಶೋಧ ಕಾರ್ಯಾಚರಣೆ ನಡೆಸುವ ಪ್ರದೇಶದಲ್ಲಿ ನಕಲಿ ಗನ್ಗಳನ್ನು ಕೊಟ್ಟು ಈ ಬೆರ್ಚಪ್ಪಗಳನ್ನು ನಿಲ್ಲಿಸಲಾಗುತ್ತಿದೆ. ನಕ್ಸಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಮಾನವ ಪ್ರತಿಕೃತಿಗಳ ಬಳಿ ಸ್ಫೋಟಕಗಳನ್ನೂ ಇಡುತ್ತಿದ್ದಾರೆ. ಇಂತಹ ಒಂದು ಕಡೆಯಲ್ಲಿ ಸುಧಾರಿತ ಐಇಡಿ ಇತ್ತು ಎಂದು ಪೊಲೀ ಸರು ಹೇಳಿದ್ದಾರೆ. ಹುಲ್ಲು ಹಾಗೂ ಮರದು ತುಂಡುಗಳನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತಿದೆ.