“ಕಾಶ್ಮೀರ ಪಂಡಿತರಿಗೆ ಏಕರೂಪದ ಆರ್ಥಿಕ ನೆರವು ನೀಡಿ’
ಕಾಂಗ್ರೆಸ್ನ ರಾಜ್ಯಸಭಾ ಸಂಸದ ದೀಪೇಂದರ್ ಹೂಡ ಆಗ್ರಹ
Team Udayavani, Mar 31, 2022, 6:40 AM IST
ನವದೆಹಲಿ: ರಾಜ್ಯಸಭಾದಲ್ಲಿನ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡ ಕಾಶ್ಮೀರ ಪಂಡಿತರ ಪರ ಧ್ವನಿಯೆತ್ತಿದ್ದಾರೆ. ರಾಜ್ಯಸಭೆಯ ಶೂನ್ಯಾವಧಿಯಲ್ಲಿ ಮಾತನಾಡಿದ ಅವರು, ನೆಲೆ ಕಳೆದುಕೊಂಡು ದೇಶಾದ್ಯಂತ ಚದುರಿ ಹೋಗಿರುವ ಕಾಶ್ಮೀರ ಪಂಡಿತರಿಗೆ ಏಕರೂಪದ ಆರ್ಥಿಕ ನೆರವಿನ ನೀತಿಯನ್ನು ಜಾರಿ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
“ಕಾಶ್ಮೀರದಲ್ಲಿ ಅವರಿಗೆ ಮತ್ತೆ ನೆಲೆಕಲ್ಪಿಸಲು ಉಪಗ್ರಹಾಧಾರಿತ ನಗರಗಳನ್ನು ನಿರ್ಮಿಸಬೇಕು” ಎಂದು ಸಲಹೆ ನೀಡಿರುವ ಅವರು, “2014ರವರೆಗೆ ಹರ್ಯಾಣದಲ್ಲಿನ ಕಾಶ್ಮೀರಿ ಪಂಡಿತರಿಗೆ ಅಂದಿನ ಕಾಂಗ್ರೆಸ್ ಸರ್ಕಾರ ತಲಾ 5,000 ರೂ. ಮಾಸಿಕ ನೆರವು ನೀಡುತ್ತಿತ್ತು. ಪ್ರಸ್ತುತ ಬಿಜೆಪಿ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ” ಎಂದೂ ಆರೋಪಿಸಿದ್ದಾರೆ.
34 ಮಂದಿಯಿಂದ ಜಮೀನು ಖರೀದಿ: ಸಂವಿಧಾನದ 370ನೇ ವಿಧಿಯನ್ನು ಜಮ್ಮು- ಕಾಶ್ಮೀರದಲ್ಲಿ ತೆರವು ಮಾಡಿದ ನಂತರ ಆ ರಾಜ್ಯದಲ್ಲಿ ಒಟ್ಟು 34 ಮಂದಿ ಹೊರಗಿನ ವ್ಯಕ್ತಿಗಳು ಜಮೀನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ.
ಇದನ್ನೂ ಓದಿ:ಭಾರತಕ್ಕೆ ಪ್ರಯಾಣಿಸುವ ಅಮೆರಿಕದ ಪ್ರಜೆಗಳು ಕಾಶ್ಮೀರಕ್ಕೆ ತೆರಳದಿರಿ: ಅಮೆರಿಕ ಎಚ್ಚರಿಕೆ
250 ಕೋಟಿ ರೂ. ದಾಟುವತ್ತ ಕಾಶ್ಮೀರ ಫೈಲ್ಸ್
ಕೇವಲ ಬಾಯಿಂದ ಬಾಯಿಗೆ ಹರಡಿಯೇ ಪ್ರಚಾರ ಪಡೆದ ಕಾಶ್ಮೀರ ಫೈಲ್ಸ್ ಸಿನಿಮಾ 250 ಕೋಟಿ ರೂ. ಗಳಿಕೆಯತ್ತ ಮುನ್ನಡೆದಿದೆ. ಒಂದು ವೇಳೆ ಇದು ಸಾಧ್ಯವಾದರೆ ದೊಡ್ಡ ದಾಖಲೆಯೇ ನಿರ್ಮಾಣವಾಗಲಿದೆ. ಇದಕ್ಕೆ ಕಾರಣ ಈ ಸಿನಿಮಾ ನಿರ್ಮಾಣವಾಗಿರುವುದು ಕೇವಲ 15 ಕೋಟಿ ರೂ.ಗಳಲ್ಲಿ.