ಹಿಂಸಾಚಾರ ಕೈಬಿಟ್ಟು ಶಾಂತಿ ಕಾಪಾಡಿಕೊಳ್ಳಿ…ಪರಿಸ್ಥಿತಿ ಸಹಜಸ್ಥಿತಿಗೆ ಬರಲಿ: ಪ್ರಧಾನಿ ಮೋದಿ
Team Udayavani, Feb 26, 2020, 4:20 PM IST
Narendra Modi
ನವದೆಹಲಿ:ಈಶಾನ್ಯ ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ಸಂಭವಿಸಿದ ಹಿಂಸಾಚಾರದಲ್ಲಿ 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಏತನ್ಮಧ್ಯೆ ದೆಹಲಿ ಜನರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ಎರಡು ಟ್ವೀಟ್ ಮಾಡಿರುವ ಪ್ರಧಾನಿ, ರಾಷ್ಟ್ರರಾಜಧಾನಿ ದೆಹಲಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಎರಡು ಉನ್ನತ ಮಟ್ಟದ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ.
ದೆಹಲಿಯ ವಿವಿಧ ಪ್ರದೇಶಗಳ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದ್ದೇನೆ. ಪೊಲೀಸರು ಹಾಗೂ ಇತರ ಏಜೆನ್ಸಿ ಶಾಂತಿ ಮತ್ತು ಸಹಜ ಸ್ಥಿತಿ ಕಾಪಾಡಲು ಕಾರ್ಯ ಪ್ರವೃತ್ತರಾಗಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ.
“ಶಾಂತಿ ಮತ್ತು ಸಾಮರಸ್ಯ ಕೇಂದ್ರದ ಮುಖ್ಯ ಧ್ಯೇಯೋದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಾಂತಿಯನ್ನು ಕಾಪಾಡಿ..ಎಲ್ಲಾ ಸಂದರ್ಭದಲ್ಲಿಯೂ ಸಹೋದರತ್ವ ಇರಲಿ. ಆದಷ್ಟು ಶೀಘ್ರ ಶಾಂತಿ ಮತ್ತು ಪರಿಸ್ಥಿತಿ ಮೊದಲಿನಂತೆ ಸಹಜಸ್ಥಿತಿಗೆ ಮರಳಬೇಕಾದ ಅಗತ್ಯವಿದೆ ಎಂದು ಮೋದಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.