ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ ಬಗ್ಗೆ ಶುಕ್ರವಾರ ಅಂತಿಮ ನಿರ್ಧಾರ; ಕಾಂಗ್ರೆಸ್
ಶಿವಸೇನಾದ ಜತೆ ಶುಕ್ರವಾರ ಮಾತುಕತೆ
Team Udayavani, Nov 21, 2019, 6:35 PM IST
ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿರುವ ನಡುವೆಯೇ ಶಿವಸೇನಾವನ್ನು ಬೆಂಬಲಿಸುವ ಮೂಲಕ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶುಕ್ರವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಎನ್ ಸಿಪಿ ಜತೆಗಿನ ಸಂಧಾನ ಮಾತುಕತೆ ಪೂರ್ಣಗೊಂಡಿದೆ ಎಂದರು.
ದಿಲ್ಲಿಯಲ್ಲಿ ಎನ್ ಸಿಪಿ ಹಿರಿಯ ಮುಖಂಡ ಶರದ್ ಪವಾರ್ ಮನೆಯಲ್ಲಿ ಎನ್ ಸಿಪಿ ಮುಖಂಡರ ಜತೆ ಕಾಂಗ್ರೆಸ್ ನಾಯಕರು ಶಿವಸೇನಾ ಜತೆ ಸೇರಿ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಮಹಾರಾಷ್ಟ್ರದಲ್ಲಿ ಎನ್ ಸಿಪಿ, ಶಿವಸೇನಾ ಜತೆ ಸೇರಿ ಸರ್ಕಾರ ರಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಗುರುವಾರ ಬೆಳಗ್ಗೆ ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಎನ್ ಸಿಪಿ ಮತ್ತು ಕಾಂಗ್ರೆಸ್ ನಡುವಿನ ಸಮಾಲೋಚನೆ ಪೂರ್ಣಗೊಂಡಿದೆ. ಎಲ್ಲಾ ವಿಚಾರದ ಬಗ್ಗೆಯೂ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಶಿವಸೇನಾದ ಜತೆ ಶುಕ್ರವಾರ ಮಾತುಕತೆ ನಡೆಸಿದ ನಂತರ ನಮ್ಮ ನಿರ್ಧಾರ ಘೋಷಿಸುವುದಾಗಿ ಚವಾಣ್ ತಿಳಿಸಿದರು.