ಹಿಂದೂ ಅರ್ಚಕನ ಹತ್ಯೆ;ಕೆಟಿಎಫ್ ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಇನಾಮು
Team Udayavani, Jul 23, 2022, 4:36 PM IST
ನವದೆಹಲಿ:ಕಳೆದ ವರ್ಷ ಪಂಜಾಬ್ನ ಜಲಂಧರ್ನಲ್ಲಿ ಹಿಂದೂ ಅರ್ಚಕನನ್ನು ಕೊಂದ ಆರೋಪಿ ಕೆನಡಾ ಮೂಲದ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನ ಕುರಿತು ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಇನಾಮು ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಘೋಷಿಸಿದೆ.
ಜಲಂಧರ್ನ ಫಿಲ್ಲೌರ್ ಪ್ರದೇಶದ ಭರ್ಸಿಂಗ್ಪುರ ಗ್ರಾಮದ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್ ಎಂಬ ವಾಂಟೆಡ್ ಭಯೋತ್ಪಾದಕನಿಗೆ ಶುಕ್ರವಾರ ಬಹುಮಾನ ಘೋಷಣೆಯಾಗಿದ್ದು, ಅರ್ಚಕನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಆತನ ಮತ್ತು ಇತರ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಮೂರು ವಾರಗಳ ನಂತರ ಶುಕ್ರವಾರ ಇನಾಮು ಘೋಷಿಸಿದೆ.
“ಜಲಂಧರ್ನಲ್ಲಿ ಹಿಂದೂ ಅರ್ಚಕರನ್ನು ಕೊಲ್ಲಲು ಕೆಟಿಎಫ್ ರೂಪಿಸಿದ ಸಂಚು ಪ್ರಕರಣದಲ್ಲಿ ನಿಜ್ಜರ್ ಎನ್ಐಎಗೆ ಬೇಕಾಗಿದ್ದ. ನಿಜ್ಜರ್ ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದು ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥರಾಗಿದ್ದಾನೆ” ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
ನಿಜ್ಜರ್ ಕುರಿತು ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್ಐಎ ಹೇಳಿದೆ.