ಕೈಲಾಸ ಪ್ರವೇಶಕ್ಕೆ ವೀಸಾ ನೀಡುತ್ತಿದ್ದಾರಂತೆ ನಿತ್ಯಾನಂದ!
Team Udayavani, Dec 19, 2020, 5:38 AM IST
ಹೊಸದಿಲ್ಲಿ: ತಾನು ಸ್ಥಾಪಿಸಿರುವ ಸಾರ್ವಭೌಮ ಹಿಂದೂ ರಾಷ್ಟ್ರ ಕೈಲಾಸಕ್ಕೆ ವೀಸಾ ಕೊಡಲು ಆರಂಭಿಸಿರುವುದಾಗಿ ಸ್ವಾಮಿ ನಿತ್ಯಾನಂದ ಘೋಷಿಸಿದ್ದಾರೆ.
2019ರ ಕೊನೆಯಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ, ಇದೀಗ ಟ್ರಿನಿಡಾಡ್ ಟೊಬ್ಯಾಗೊ ಮತ್ತು ಈಕ್ವೆಡಾರ್ ನಡುವಿನ ದ್ವೀಪವೊಂದರಲ್ಲಿ ನೆಲೆ ನಿಂತಿದ್ದಾರೆ. ಆ ಜಾಗದಲ್ಲಿ ಆಶ್ರಮ ಸ್ಥಾಪಿಸಿರುವ ಅವರು ಅದಕ್ಕೆ ಕೈಲಾಸ ಎಂದು ಹೆಸರಿಟ್ಟು, ಅದನ್ನು ಸಾರ್ವಭೌಮ ಹಿಂದೂರಾಷ್ಟ್ರ ಎಂದು ಘೋಷಿಸಿದ್ದಾರೆ. ಅಷ್ಟು ಮಾತ್ರವಲ್ಲ ಕಳೆದ ವರ್ಷ ಆಗಸ್ಟ್ ನಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪಿಸಿ, ತನ್ನ ದೇಶದ ಆರ್ಥಿಕ ನೀತಿಗಳನ್ನು ಪ್ರಕಟಿಸಿದ್ದರು. ವೀಸಾಕ್ಕೆ ಅರ್ಜಿ ಸಲ್ಲಿಸಲು ಇ-ಮೇಲ್ ಐಡಿಯೂ ಇದೆ. ವೀಸಾಗಳನ್ನು ಕೊಡಲು ಆರಂಭಿಸಲಾಗಿದೆ ಎಂದಿದ್ದರೂ, ನಿರ್ದಿಷ್ಟವಾಗಿ ದೇಶ ಎಲ್ಲಿದೆ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ. ಅಲ್ಲದೇ ಮೂರು ದಿನಕ್ಕಿಂತ ಜಾಸ್ತಿ ಕೈಲಾಸದಲ್ಲಿ ಉಳಿಯುವಂತಿಲ್ಲ ಎಂದೂ ಸೂಚಿಸಲಾಗಿದೆ. ಆಸ್ಟ್ರೇಲಿಯದಿಂದ ಕೈಲಾಸಕ್ಕೆ ಪ್ರಯಾಣಿಸಲು ಗರುಡ ಹೆಸರಿನ ವಿಶೇಷ ವಿಮಾನಯಾನ ಸೇವೆಯೂ ಇದೆ ಎಂದು ನಿತ್ಯಾನಂದ ಪ್ರಕಟಿಸಿದ್ದಾರೆ.