ಟಿಎಂಸಿಗೆ ಕೇಂದ‹ ತಿರುಗೇಟು
Team Udayavani, Aug 4, 2018, 6:00 AM IST
ನವದೆಹಲಿ/ಕೋಲ್ಕತಾ: ನಾಗರಿಕರ ರಾಷ್ಟ್ರೀಯ ನೋಂದಣಿ ವಿಚಾರವಾಗಿ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲ ಬಳಸಿಕೊಂಡು ಭಯ ಮತ್ತು ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟಿಎಂಸಿಗೆ ತಿರುಗೇಟು ನೀಡಿದ್ದಾರೆ. ಆದರೆ, ರಾಜನಾಥ್ ಹೇಳಿಕೆ ತಿರಸ್ಕರಿಸಿರುವ ಟಿಎಂಸಿ ಶನಿವಾರ ಮತ್ತು ಭಾನುವಾರ ಪಶ್ಚಿಮ ಬಂಗಾಳದಾದ್ಯಂತ ಕರಾಳ ದಿನ ಆಚರಿಸಲು ನಿರ್ಧರಿಸಿದೆ. ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ಸಿಂಗ್, ಇನ್ನೂ ಪ್ರಕ್ರಿಯೆ ಮುಗಿದಿಲ್ಲ. ಈಗ ಬಹಿರಂಗವಾಗಿರುವುದು ಕೇವಲ ಕರಡು ಪಟ್ಟಿ. ನಿಜವಾದ ಭಾರತೀಯರು ಈ ಪಟ್ಟಿಯಿಂದ ಬಿಟ್ಟು ಹೋಗಲ್ಲ. ಇಡೀ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಮಾಡುತ್ತಿದ್ದೇವೆ ಎಂದರು.
ಕಳೆದ 3 ದಿನಗಳಿಂದಲೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ನ ಸಂಸದರು ನಡೆಸುತ್ತಿದ್ದ ಪ್ರತಿಭಟನೆಗೆ ಪ್ರತಿಯಾಗಿ ಈ ಉತ್ತರ ನೀಡಿದರು. ಪಟ್ಟಿ ಬಿಡುಗಡೆಯಾದ ಬಳಿಕ ಕೇಂದ್ರ ಸರ್ಕಾರವೇ ಭದ್ರತೆಗಾಗಿ ಕೇಂದ್ರ ಪಡೆಗಳನ್ನು ಅಸ್ಸಾಂಗೆ ಕಳುಹಿಸಿದೆ. ಅಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನೂ ನೋಡಿಕೊಳ್ಳಲಾಗುತ್ತಿದೆ ಎಂದು ರಾಜನಾಥ್ ಹೇಳಿದರು. ಅಲ್ಲದೆ ಪಟ್ಟಿ ರಚಿಸುವಾಗ ಕೆಲವರ ಹೆಸರುಗಳನ್ನು ಬೇಕೆಂದೇ ಬಿಡಲಾಗಿದೆ ಎಂಬುದು ಸುಳ್ಳು. ಇಂಥ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದ ಅವರು, ಇಡೀ ಎನ್ಆರ್ಸಿ ಪ್ರಕ್ರಿಯೆ 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾ ಗಿದ್ದಾಗ ಶುರುವಾದದ್ದು ಎಂದು ನೆನಪಿಸಿದರು.
ಪ್ರತಿಯೊಂದು ದೇಶವೂ ತನ್ನ ನಿಜವಾದ ನಾಗರಿಕರನ್ನು ಗುರುತಿಸುವ ಕೆಲಸ ಮಾಡುತ್ತದೆ. ಅದು ಅವರ ಜವಾಬ್ದಾರಿಯೂ ಹೌದು. ಹಾಗೆಯೇ ನಾವೂ ಮಾಡಿದ್ದೇವೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿಯಾಗಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಎಲ್ಲ ಪ್ರತಿಪಕ್ಷಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಆದರೆ, ಸಮಾಜದಲ್ಲಿ ಗದ್ದಲ ಎಬ್ಬಿಸುವ ಸಲುವಾಗಿ ಕೆಲವರು ಕೆಲಸ ಮಾಡುತ್ತಿದ್ದಾರೆ. ಇಂಥ ಯಾವುದೇ ಪ್ರಯತ್ನಗಳು ಕೈಗೂಡುವುದಿಲ್ಲ ಎಂದರು. ಅಲ್ಲದೆ, ಇಡೀ ಪ್ರಕ್ರಿಯೆ ಸುಪ್ರೀಂಕೋರ್ಟ್ನ ಕಣ್ಗಾವಲಿನಲ್ಲೇ ನಡೆಯುತ್ತಿದೆ ಎಂದೂ ಹೇಳಿದರು.
ಭದ್ರತೆ ವಿಚಾರದಲ್ಲಿ ರಾಜಿ ಬೇಡ: ರಾಜನಾಥ್ ಹೇಳಿಕೆಯನ್ನು ಕೆಲವು ಸದಸ್ಯರು ಸ್ವಾಗತಿಸಿದರೆ, ಇನ್ನೂ ಕೆಲವರು ಸಲಹೆ ನೀಡಿದರು. ಕಾಂಗ್ರೆಸ್ ಸದಸ್ಯ ಹಾಗೂ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು, ದೇಶದ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಸಲ್ಲದು ಎಂದರು. ಆದರೆ, ಈ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತ ಪಕ್ಷದ ಧ್ವನಿ ಒಂದೇ ಇರಬೇಕು. ಆದರೆ ಬಿಜೆಪಿ ಅಧ್ಯಕ್ಷರು ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಟಿಎಂಸಿಯ ಡೆರೆಕ್ ಒಬ್ರಿಯಾನ್ ಮಾತನಾಡಿ, ಇದು ಕೇವಲ ಅಸ್ಸಾಂಗೆ ಸಂಬಂಧಿಸಿದ್ದಲ್ಲ, ಇಡೀ ದೇಶಕ್ಕೆ ಸಂಬಂಧಿಸಿದ್ದು. ಸರ್ಕಾರ ಇಲ್ಲಿ ಒಂದು ರೀತಿಯ ಹೇಳಿಕೆ ನೀಡುತ್ತಿದೆ. ಆದರೆ ಪಕ್ಷ ಬೇರೊಂದು ಧ್ವನಿಯಲ್ಲಿ ಮಾತನಾಡುತ್ತಿದೆ ಎಂದು ಟೀಕಿಸಿದರು.
ಈ ಮಧ್ಯೆ ಎನ್ಆರ್ಸಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ಇದರಂತೆಯೇ ಕಾಶ್ಮೀರಿ ಪಂಡಿತರನ್ನು ಘರ್ವಾಪ್ಸಿ ಮಾಡಿ ಎಂದೂ ಅದು ಒತ್ತಾಯಿಸಿದೆ. ಇನ್ನೊಂದೆಡೆ, ಆ.11 ರಂದು ಕೋಲ್ಕತಾದಲ್ಲಿ ನಡೆಯಲಿರುವ ಬಿಜೆಪಿ ರ್ಯಾಲಿಯಲ್ಲಿ ಟಿಎಂಸಿಯ ನಿಜಬಣ್ಣ ಬಯಲು ಮಾಡುವುದಾಗಿ ಬಿಜೆಪಿ ಹೇಳಿದೆ.
ಮುಂದುವರಿದ ಪ್ರತಿಭಟನೆ
ಅಸ್ಸಾಂನ ರಾಜಧಾನಿ ಗುವಾಹಟಿ ಮತ್ತು ಸಿಲ್ಚಾರ್ ಜಿಲ್ಲೆಯಲ್ಲಿ ಟಿಎಂಸಿ ಸಂಸದರನ್ನು ತಡೆದ ಸರ್ಕಾರದ ಕ್ರಮ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಶುಕ್ರ ವಾರ ಪ್ರತಿಭಟನೆ, ರೈಲು ತಡೆ ಘಟನೆಗಳು ನಡೆ ದಿವೆ. ಅಲ್ಲದೆ ಶನಿವಾರ ಮತ್ತು ಭಾನುವಾರ ರಾಜ್ಯಾ ದ್ಯಂತ ಕರಾಳದಿನ ಆಚರಿಸುವುದಾಗಿ ಟಿಎಂಸಿ ಹೇಳಿಕೊಂಡಿದೆ. ಗೃಹ ಸಚಿವರ ಹೇಳಿಕೆ ತೃಪ್ತಿ ತಂದಿಲ್ಲ. ಹೀಗಾಗಿ 2 ದಿನ ಕರಾಳದಿನ ಆಚರಿ ಸುತ್ತೇ ವೆ ಎಂದಿ ರುವ ಟಿಎಂಸಿ ನಾಯಕರು, ಸಭೆ ಸೇರಿ ಮುಂದಿನ ವಾರ ಯಾವ ರೀತಿ ಹೋರಾಟ ನಡೆಸ ಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ದ್ದಾರೆ. ಈ ಮಧ್ಯೆ, ಗುರುವಾರ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಒಳನುಸುಳು ಕೋ ರರನ್ನು ಹೊರಗೆ ಅಟ್ಟಿದ ರೀತಿ ನಡೆಸಿಕೊಳ್ಳಲಾ ಯಿತು ಎಂದು ಟಿಎಂಸಿ ಸಂಸದರು ನೋವು ತೋಡಿಕೊಂಡಿದ್ದಾರೆ.
ನಾಗರಿಕರ ರಾಷ್ಟ್ರೀಯ ನೋಂದಣಿ ಪಟ್ಟಿ ಇನ್ನೂ ಅಂತಿಮವಾಗಿಲ್ಲ
ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ
ಸಚಿವರ ಹೇಳಿಕೆಯಿಂದ ತೃಪ್ತರಾಗದ ಟಿಎಂಸಿ, ಇಂದು-ನಾಳೆ ಕಪ್ಪುದಿನ ಆಚರಣೆ