ಗಡಿ ಸಮಸ್ಯೆ ಹೊಸದಲ್ಲ, ನಿಭಾಯಿಸ್ತೇವೆ: ಜೈಶಂಕರ್
Team Udayavani, Jul 12, 2017, 2:40 AM IST
ಸಿಂಗಾಪುರ: ‘ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಈ ಬಾರಿ ಯಾಕೆ ಇಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೆಯೂ ಚೀನಾ ಜತೆ ಗಡಿ ವಿವಾದವನ್ನು ಬಗೆಹರಿಸಿದ್ದೇವೆ. ಮುಂದೆಯೂ ನಿಭಾಯಿಸುತ್ತೇವೆ. ವಿಫಲವಾಗಲು ಯಾವ ಕಾರಣಗಳೂ ಇಲ್ಲ’ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದ್ದಾರೆ.
ಭಾರತ ರಾಯಭಾರ ಕಚೇರಿ ಹಾಗೂ ಲೀ ಕುಯಾನ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಮಾತನಾಡಿದ ಜೈಶಂಕರ್, ಸಿಕ್ಕಿಂ ಗಡಿ ವಿಚಾರವನ್ನೇ ಪ್ರಸ್ತಾವಿಸಿ ಮಾತನಾಡಿದರು. ಈ ಹಿಂದೆ ಇಂಥ ಸಾಕಷ್ಟು ಸಂದಿಗ್ಧತೆಗಳನ್ನು ಎದುರಿಸಿದ್ದೇವೆ. ಈಗಲೂ ಚೀನದೊಂದಿಗಿನ ಪ್ರತಿಯೊಂದು ವಿಚಾರಗಳನ್ನೂ ಭಾರತ ‘ರಾಜತಾಂತ್ರಿಕ ಪರಿಪಕ್ವತೆ’ಯಿಂದಲೇ ಬಗೆಹರಿಸಿಕೊಳ್ಳಲಿದೆ. ಅಭಿಪ್ರಾಯ ಭಿನ್ನತೆಯಿಂದ ಸಮಸ್ಯೆ ಉದ್ಭವಿಸಿದೆಯಷ್ಟೆ. ಅಷ್ಟಕ್ಕೂ ಗಂಭೀರವಾಗಿ ಚಿಂತಿಸಬೇಕಾದ ಸಮಸ್ಯೆಯೇನಲ್ಲ’ ಎಂದ ಅವರು ನುಡಿದರು. ಇದೇ ವೇಳೆ, ಸಿಕ್ಕಿಂ ಗಡಿ ವಿವಾದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕ ನಿರಾಕರಿಸಿದೆ.