PM ಮೋದಿ ಹೇಳಿಕೆ ಸರಿ, ದೇಶಾದ್ಯಂತ ಎನ್ ಆರ್ ಸಿ ಜಾರಿ ಬಗ್ಗೆ ಚರ್ಚೆಯೇ ನಡೆದಿಲ್ಲ: ಅಮಿತ್ ಶಾ
ಈ ಬಗ್ಗೆ (ದೇಶಾದ್ಯಂತ ಎನ್ ಆರ್ ಸಿ ಜಾರಿ) ಚರ್ಚಿಸಬೇಕಾದ ಅಗತ್ಯವಿಲ್ಲ
Team Udayavani, Dec 25, 2019, 12:33 PM IST
ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಎನ್ ಆರ್ ಸಿ ಜಾರಿ ಕುರಿತು ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
ಎಎನ್ ಐ ನ್ಯೂಸ್ ಏಜೆನ್ಸಿ ಜತೆ ಮಾತನಾಡಿದ ಅವರು, ಈ ಬಗ್ಗೆ (ದೇಶಾದ್ಯಂತ ಎನ್ ಆರ್ ಸಿ ಜಾರಿ) ಚರ್ಚಿಸಬೇಕಾದ ಅಗತ್ಯವಿಲ್ಲ. ಎನ್ ಆರ್ ಸಿ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ಸರಿಯಾಗಿದೆ. ಎನ್ ಆರ್ ಸಿ ಕುರಿತು ಸಂಸತ್ ನಲ್ಲಾಗಲಿ, ಸಚಿವ ಸಂಪುಟದಲ್ಲಾಗಲಿ ಯಾವುದೇ ಚರ್ಚೆಯೇ ನಡೆದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ನಂತರ ವಿರೋಧಪಕ್ಷಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದವು. ಈಗಾಗಲೇ ದೇಶಾದ್ಯಂತ ಎನ್ ಆರ್ ಸಿ ಜಾರಿ ಮಾಡುವುದಾಗಿ ಅಮಿತ್ ಶಾ ಹೇಳಿದ್ದರು. ಅಲ್ಲದೇ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆಯ ವೇಳೆಯೂ ಅಮಿತ್ ಶಾ ಅವರು ಎನ್ ಆರ್ ಸಿಯನ್ನು ದೇಶಾದ್ಯಂತ ಕೂಡಲೇ ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದವು.