ಹರಿಯಾಣ ಸರ್ಕಾರ ರಚನೆಗೆ ದುಶ್ಯಂತ್ ಮಾತ್ರವಲ್ಲ, ಈ ಆರು ಮಂದಿ ಪಕ್ಷೇತರರು ಕಿಂಗ್ ಮೇಕರ್!
Team Udayavani, Oct 24, 2019, 1:45 PM IST
ಹರಿಯಾಣ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ರಚಿಸಲು ಪಕ್ಷೇತರರು ಅಥವಾ ಇತರ ಪ್ರಾದೇಶಿಕ ಪಕ್ಷದ ಕೈಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ನಡೆಯುತ್ತಿದ್ದು, ವರದಿಗಳ ಪ್ರಕಾರ ಜೆಜೆಪಿಯ ದುಶ್ಯಂತ್ ಚೌಟಾಲ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದ್ದವು. ಆದರೆ ಹರಿಯಾಣದ ವಿಧಾನಸಭಾ ಚುನಾವಣಾ ಅಖಾಡದಲ್ಲಿರುವ ಆರು ಮಂದಿ ಪಕ್ಷೇತರರು ಕೂಡಾ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ಪಕ್ಷೇತರ ಅಭ್ಯರ್ಥಿಗಳಾದ ಬಲ್ ರಾಜ್ ಕುಂಡು (ಮೇಹಂ ಕ್ಷೇತ್ರ), ನಯನ್ ಪಾಲ್ ರಾವತ್ (ಪ್ರೈಥಾಲಾ), ರಾನ್ ಧೀರ್ ಸಿಂಗ್ (ಪುಂಡ್ರಿ), ಗೋಕುಲ್ ಸೇಟಿಯಾ (ಸಿರ್ಸಾ), ರಣಜಿತ್ ಸಿಂಗ್ (ರಾನಿಯಾ), ರಾಕೇಶ್ ದೌಲತ್ ಬಾದ್ (ಬಾದಶಾಪುರ್) ಮುನ್ನಡೆ ಸಾಧಿಸಿದ್ದಾರೆ.
ಈ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದಲ್ಲಿ ಇವರು ಕೂಡಾ ಮುಂದಿನ ಸರ್ಕಾರ ಯಾರು ರಚಿಸಬೇಕು ಎಂಬ ಬಗ್ಗೆ ನಿರ್ಣಾಯಕರಾಗಲಿದ್ದಾರೆ.