ಒಮಿಕ್ರಾನ್ ಸೋಂಕಿತರಿಗೆ ಅಲ್ಪ ಪ್ರಮಾಣ ಸೋಂಕು
ಜೈಪುರ ಆಸ್ಪತ್ರೆಯ ವೈದ್ಯರ ಅಭಿಮತ; ವಾಸನೆ ಗ್ರಹಿಕೆ, ರುಚಿ ನಷ್ಟ ಸಮಸ್ಯೆ ಕಾಡಿಲ್ಲ
Team Udayavani, Dec 8, 2021, 6:30 AM IST
ನವದೆಹಲಿ: ಕೊರೊನಾ ರೂಪಾಂತರಿ ಒಮಿಕ್ರಾನ್ಗೆ ಆತಂಕಪಡುವ ಅಗತ್ಯವಿಲ್ಲ ಎಂಬ ಅಂಶ ಮತ್ತೂಮ್ಮೆ ಸಾಬೀತಾಗಿದೆ. ರಾಜಸ್ಥಾನದಲ್ಲಿ ದೃಢಪಟ್ಟಿರುವ ಒಂಭತ್ತು ಪ್ರಕರಣಗಳಲ್ಲಿ ಅಲ್ಪ ತೀವ್ರತೆಯ ಸೋಂಕು ಇರುವುದು ದೃಢಪಟ್ಟಿದೆ.
ಈ ಬಗ್ಗೆ 9 ಮಂದಿಗೆ ಚಿಕಿತ್ಸೆ ನೀಡುತ್ತಿರುವ ಜೈಪುರದ ಸವಾಯ್ ಮಾನ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಮಂಗಳವಾರ ತಿಳಿಸಿದ್ದಾರೆ. ಇದರ ಜತೆಗೆ ಸೋಂಕಿನ ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿದ್ದಂತೆ ವಾಸನೆ ಗುರುತಿಸಲು ಅಸಾಧ್ಯವಾಗುವ ಮತ್ತು ರುಚಿವನ್ನು ಗ್ರಹಿಸಲು ಅಸಾಧ್ಯವಾಗುವ ಲಕ್ಷಣಗಳು ಅವರಲ್ಲಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಕೊರೊನಾ ಪತ್ತೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿರುವುದರಿಂದಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಯಾರೂ ಆತಂಕ ಪಡಬೇಕಾಗಿಲ್ಲ ಮತ್ತು ಮೂರನೇ ಅಲೆ ಶುರುವಾಗಿಲ್ಲ ಎಂದು ಆರೋಗ್ಯ ಕ್ಷೇತ್ರದ ತಜ್ಞರಾಗಿರುವ ರಿಜೋ ಎಂ.ಜಾನ್ ಮತ್ತು ಡಾ.ಚಂದ್ರಕಾಂತ್ ಲಹಾರಿಯಾ ಹೇಳಿದ್ದಾರೆ.
ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!
ಕಡಿತಕ್ಕೆ ಸೂಚನೆ ಬಂದಿಲ್ಲ:
ಕೊವಿಶೀಲ್ಡ್ ಲಸಿಕೆಯ ಉತ್ಪಾದನೆ ಪ್ರಮಾಣವನ್ನು ಮುಂದಿನ ವಾರದಿಂದ ಅನ್ವಯವಾಗುವಂತೆ ಶೇ.50ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ತಿಳಿಸಿಲ್ಲ ಎಂದು ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.
10 ಕೋಟಿ ಡೋಸ್:
ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನಗಳಲ್ಲಿ ಹತ್ತು ಕೋಟಿ ಡೋಸ್ಗಳಿಗೂ ಹೆಚ್ಚು ಲಸಿಕೆ ಉಪಯೋಗವಾಗದೇ ಉಳಿದಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದಾಖಲೆಗಳಲ್ಲಿಯೇ ಉಲ್ಲೇಖಗೊಂಡಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಂಗಳವಾರ ತಿಳಿಸಿದೆ.
ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 23 ಕೋಟಿ ಡೋಸ್ ಲಸಿಕೆ ಇನ್ನೂ ಸಂಗ್ರಹವಾಗಿದೆ ಎಂದು ತಿಳಿಸಿದೆ. ಮತ್ತೊಂದು ಬೆಳವಣಿಗೆಯಲ್ಲಿ ಒಮಿಕ್ರಾನ್ ರೂಪಾಂತರಿಗೆ ಗ್ಲಾಕೊ ಸ್ಮಿತ್ಲೈನ್ ಕಂಪನಿ ಸಂಶೋಧನೆ ನಡೆಸುತ್ತಿರುವ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.