ರಾಮ ಮಂದಿರ ನಿರ್ಮಾಣಕ್ಕೆ ಹಿಂದೂ ಕುಟುಂಬಗಳಿಂದ ಮಾತ್ರ ದೇಣಿಗೆಗೆ ಮನವಿ
Team Udayavani, Jan 3, 2021, 9:03 AM IST
ಹೊಸದಿಲ್ಲಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ನಿಧಿ ಸಂಗ್ರಹಕ್ಕೆ ಸಿದ್ಧತೆ ಆರಂಭಿಸಿರುವ ವಿಶ್ವ ಹಿಂದೂ ಪರಿಷತ್, ಕೇವಲ ಹಿಂದೂ ಕುಟುಂಬಗಳಿಗೆ ಮಾತ್ರವೇ ದೇಣಿಗೆಗೆ ಮನವಿ ಮಾಡಲಿದೆ ಎಂದು ವಿಹಿಂಪ ವಕ್ತಾರ ವಿಜಯ ಶಂಕರ್ ತಿವಾರಿ ತಿಳಿಸಿದ್ದಾರೆ.
ನಿಧಿ ಸಂಗ್ರಹ ಅಭಿಯಾನ ಕುರಿತು ವರದಿಗಾರರೊಂದಿಗೆ ಮಾತನಾಡಿದ ಅವರು, “ಕಾರ್ಯಕರ್ತರು ದೇಣಿಗೆ ಸಂಗ್ರಹಿಸಲು ದೇಶದ ಪ್ರತಿ ಪ್ರದೇಶಗಳ ಮನೆಗಳಿಗೂ ಭೇಟಿ ನೀಡಲಿದ್ದಾರೆ. ಆದರೆ, ಅನ್ಯಧರ್ಮೀಯರ ಮನೆಗೆ ತೆರಳಿ, ದೇಣಿಗೆ ನೀಡುವಂತೆ ಮನವಿ ಮಾಡುವುದಿಲ್ಲ’ ಎಂದು ತಿಳಿಸಿದರು.
“ಒಂದು ವೇಳೆ ಅನ್ಯಧರ್ಮೀಯರು ಸ್ವಪ್ರೇರಿತರಾಗಿ ದೇಣಿಗೆ ನೀಡಿದರೆ, ಅದನ್ನು ಗೌರವಯುತವಾಗಿ ಸ್ವೀಕರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಜ.15ರಿಂದ ಆರಂಭಗೊಳ್ಳುವ ದೇಣಿಗೆ ಸಂಗ್ರಹ ಫೆ.27ರ ವರೆಗೆ ನಡೆಯಲಿದೆ. ಸಣ್ಣ ರಾಜ್ಯವಾಗಿರುವ ಕಾರಣ ಉತ್ತರಾಖಂಡದಲ್ಲಿ ಮಾತ್ರ ಫೆ.5ಕ್ಕೆ ಅಭಿಯಾನ ಮುಕ್ತಾಯ ಕಾಣಲಿದೆ.