ಅಪಘಾತದಲ್ಲಿ ಸಾವು: ಅಂಗಾಂಗ ದಾನ
Team Udayavani, Jan 4, 2019, 5:37 AM IST
ಮಂಗಳೂರು/ಕಡಬ: ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ ಬಂಟ್ವಾಳ ಮೂಲದ ಬಸ್ ನಿರ್ವಾಹಕನ ಅಂಗಾಂಗ ದಾನ ಮಾಡುವ ಮೂಲಕ ನೋವಿನ ನಡುವೆಯೂ ಯುವಕನ ಕುಟುಂಬ ಮಾನವೀಯತೆ ಮೆರೆದು ಮಾದರಿಯಾಗಿದೆ.
ಖಾಸಗಿ ಬಸ್ ನಿರ್ವಾಹಕರಾಗಿದ್ದ ಬಂಟ್ವಾಳದ ವಿಟ್ಲ ಮಂಗಲಪದಲವು ನಿವಾಸಿ ಹರಿಣಾಕ್ಷ (32) ಅವರು ಸ್ನೇಹಿತ ಸಂತೋಷ್ ಕುಮಾರ್ ಚಲಾಯಿಸುತ್ತಿ ಬೈಕಿನಲ್ಲಿ ಡಿ. 31ರಂದು ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ತೆರಳುತ್ತಿದ್ದ ಸಂದರ್ಭ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬಿಳಿನೆಲೆ ಬಳಿ ಅಪಘಾತ ಸಂಭವಿಸಿತ್ತು. ಪಕ್ಕದ ಕಾಡಿನಿಂದ ನರಿಗಳ ಗುಂಪು ಹಠಾತ್ ಅಡ್ಡ ಬಂದ ಕಾರಣ ಬೈಕ್ ಪಲ್ಟಿಯಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದರು.
ಗಾಯಾಳು ಹರಿಣಾಕ್ಷ ಅವರನ್ನು ನಗರದ ಎ.ಜೆ. ಆಸ್ಪತ್ರೆಗೆ ಸೇರಿಸಲಾಗಿತ್ತು. ತಲೆಗೆ ಗಂಭೀರ ಏಟಾದ ಹಿನ್ನೆಲೆಯಲ್ಲಿ ಜ. 2ರಂದು ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ವಿಚಾರವನ್ನು ಆಸ್ಪತ್ರೆ ವೈದ್ಯರು ಹರಿಣಾಕ್ಷ ಅವರ ಮನೆಯವರಿಗೆ ತಿಳಿಸಿದ್ದರು. ಅಲ್ಲದೆ ಅಂಗಾಂಗ ದಾನ ಮಾಡುವಂತೆ ಸೂಚಿಸಿದ್ದರು.
ಕುಟುಂಬವು ಅಂಗಾಂಗ ದಾನ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಂಗಾಂಗ ಅವಶ್ಯ ಇರುವ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಯಿತು. ಗುರುವಾರ ಬೆಳಗ್ಗೆ 4 ಗಂಟೆಗೆ ಅಂಗಾಗ ತೆಗೆಯುವ ಶಸ್ತ್ರಚಿಕಿತ್ಸೆ ಆರಂಭಿಸಿ 7.30ಕ್ಕೆ ಝೀರೋ ಟ್ರಾಫಿಕ್ನಲ್ಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಯಿತು. ಅಲ್ಲಿಂದ ವಿಮಾನದಲ್ಲಿ ಹರಿಣಾಕ್ಷನ ಅಂಗಾಂಗವನ್ನು ಬೆಂಗಳೂರಿಗೆ ರವಾನೆ ಮಾಡಲಾಯಿತು.
ಲಿವರ್ ಹಾಗೂ ಹಾರ್ಟ್ ವಾಲ್ ಅನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಕಾರ್ನಿಯಾ ಮತ್ತು ಇನ್ನೊಂದು ಕಿಡ್ನಿಯನ್ನು ಎ.ಜೆ. ಆಸ್ಪತ್ರೆಯಲ್ಲಿ ಕಸಿ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ. ಹರಿಣಾಕ್ಷ ಅವರು ತಂದೆ ಸಂಜೀವ ಪೂಜಾರಿ, ತಾಯಿ ಹಾಗೂ ಐವರು ಸಹೋದರರನ್ನು ಅಗಲಿದ್ದಾರೆ.