ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ: ಪಿಎಂ ನರೇಂದ್ರ ಮೋದಿ
Team Udayavani, Apr 14, 2018, 6:00 AM IST
ನವದೆಹಲಿ: ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣವನ್ನು ಪ್ರಧಾನಿ ಮೋದಿ ಕಟುಶಬ್ದಗಳಿಂದ ಖಂಡಿಸಿದ್ದಾರೆ. ಎರಡೂ ಪ್ರಕರಣಗಳು ಹೀನ ಕೃತ್ಯಗಳು ಮತ್ತು ಈ ಘಟನೆಗಳು ನಾಗರಿಕ ಸಮಾಜದ ಭಾಗವೇ ಅಲ್ಲ ಎಂದು ಹೇಳಿದ್ದಾರೆ. ಸಮಾಜದ ಮತ್ತು ದೇಶದ ದೃಷ್ಟಿಯಿಂದ ಎರಡೂ ಘಟನೆಗಳು ತಲೆ ತಗ್ಗಿಸು ವಂಥವುಗಳು ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ಶುಕ್ರವಾರ ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ಎರಡೂ ಪ್ರಕರಣಗಳಲ್ಲಿ ಯಾರೇ ಭಾಗಿಗಳಾಗಲಿ, ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ.
ನಮ್ಮ ಕುಟುಂಬ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಪ್ರತಿಪಾದಿಸಿದ ಮೋದಿ, ಜತೆಗೆ ಸಾಮಾಜಿಕ ಮೌಲ್ಯ, ಕಾನೂನು ಸುವ್ಯವಸ್ಥೆಯನ್ನೂ ಅದಕ್ಕೆ ಜತೆಗೂಡಿಸಿ ಶಕ್ತಿ ವರ್ಧಿಸಬೇಕು ಎಂದು ಹೇಳಿದ್ದಾರೆ.
ಹೆಣ್ಣು ಮಕ್ಕಳು ವಿಳಂಬವಾಗಿ ಮನೆಗೆ ಬಂದಾಗ ವಿಚಾರಣೆ ನಡೆಸುವ ಹೆತ್ತವರು ಮಗ ತಡವಾಗಿ ಬಂದಾಗಲೂ ತಡವೇಕೆ ಎಂದು ಪ್ರಶ್ನೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಹಿಂದೆ ಕೆಂಪು ಕೋಟೆಯಲ್ಲಿ ಮಾತನಾಡಿದ್ದಾಗಲೂ ವಿಳಂಬವಾಗಿ ಏಕೆ ಮನೆಗೆ ಬರುತ್ತೀರಿ ಎಂದು ಹೆತ್ತವರು ಮಗನನ್ನೇ ಪ್ರಶ್ನಿಸಬೇಕು ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕದ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಈ ಕೆಲಸ ಮೊದಲೇ ಆಗಬೇಕಾಗಿತ್ತು. ಸದ್ಯದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅದು ಪೂರ್ತಿಯಾಗಿದೆ ಎಂದು ಪ್ರತಿಪಾದಿಸಿದರು ಪ್ರಧಾನಿ ಮೋದಿ.