ಪಾಕ್ ಪ್ರಧಾನಿ ಸತ್ಯಕ್ಕೆ ಕುರುಡು : ಇಮ್ರಾನ್ಗೆ ಭಾರತದ ತಿರುಗೇಟು
Team Udayavani, Feb 19, 2019, 1:53 PM IST
ಹೊಸದಿಲ್ಲಿ : ‘ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿಲ್ಲ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದನ್ನು ತೀವ್ರವಾಗಿ ಖಂಡಿಸಿರುವ ಭಾರತ, “ನೀವು ಸತ್ಯಕ್ಕೆ ಕುರುಡಾಗಿದ್ದೀರಿ” ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.
“ಇಮ್ರಾನ್ ಖಾನ್ ತನ್ನ ಹೇಳಿಕೆಯಲ್ಲಿ ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸಿಲ್ಲ ; ಪ್ರಾಣ ಕಳೆದುಕೊಂಡ ಯೋಧರ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಲ್ಲ’ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
“ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೇಳಿದ್ದಾರೆ. ಇದೊಂದು ಕೇವಲ ನೆಪ ಮಾತ್ರ. ಹಿಂದೆ 26/11ರ ಮುಂಬಯಿ ದಾಳಿ ಬಗ್ಗೆ ಪರ್ಯಾಪ್ತ ಪುರಾವೆಗಳನ್ನು ಕೊಟ್ಟರೂ ಅದರ ತನಿಖೆಯನ್ನು ಕಳೆದ ಹತ್ತು ವರ್ಷಗಳಿಂದ ಪಾಕಿಸ್ಥಾನ ತಳ್ಳುತ್ತಾ ಬಂದಿದೆ. ಇದೇ ರೀತಿ ಪಠಾಣ್ಕೋಟ್ ದಾಳಿಯ ಪುರಾವೆ ನೀಡಿದರೂ ಪಾಕಿಸ್ಥಾನ ಏನೂ ಮಾಡಿಲ್ಲ” ಎಂದು ಭಾರತ ಕಟುವಾಗಿ ಹೇಳಿದೆ.
“ನಿಮ್ಮ ನಯಾ ಪಾಕಿಸ್ಥಾನದಲ್ಲಿ ಸಚಿವರು ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟಿರುವ ಹಾಫೀಜ್ ಸಯೀದ್ ನಂತಹ ಉಗ್ರರೊಂದಿಗೆ ಬಹಿರಂಗವಾಗಿ ವೇದಿಕೆ ಹಂಚಿಕೊಳ್ಳುತ್ತಾರೆ” ಎಂದು ಭಾರತ ಹೇಳಿದೆ.