ಪಾಕ್ ನಿಂದ 2335 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ; ಕೇಂದ್ರ ಸರ್ಕಾರ
ಪಾಕ್ ನಡೆಸಿದ ದಾಳಿಯಲ್ಲಿ ಎಂಟು ಮಂದಿ ಭಾರತೀಯ ಯೋಧರು ಹುತಾತ್ಮ
Team Udayavani, Feb 4, 2020, 11:53 AM IST
ನವದೆಹಲಿ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಸಮೀಪ 2019ರ ಮೇ 30ರಿಂದ 2020ರ ಜನವರಿ 20ರವರೆಗೆ 2,335 ಬಾರಿ ಕದನ ವಿರಾಮ ಉಲ್ಲಂಘಿಸಿರುವ ಘಟನೆ ನಡೆದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಜಮ್ಮು ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿಯೂ ಇಂಡೋ ಪಾಕ್ ನಡುವೆ ಗಡಿನಿಯಂತ್ರಣದ ಬಳಿ 117 ದಾಳಿ ನಡೆದಿರುವುದಾಗಿ ವರದಿ ವಿವರಿಸಿದೆ.
2019ರ ಮೇ 30ರಿಂದ ಈವರೆಗೆ ಕದನ ವಿರಾಮ ಉಲ್ಲಂಘಿಸಿ ಪಾಕ್ ನಡೆಸಿದ ದಾಳಿಯಲ್ಲಿ ಎಂಟು ಮಂದಿ ಭಾರತೀಯ ಯೋಧರು ಹುತಾತ್ಮರಾಗಿರುವುದಾಗಿ ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ರಾಜ್ಯ ಸಭೆಗೆ ತಿಳಿಸಿದ್ದಾರೆ.
ಸೋಮವಾರ ಜಮ್ಮು ಕಾಶ್ಮೀರದ ಟಾಂಗ್ಧಾರ್ ಸೆಕ್ಟರ್ ಸಮೀಪ ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಪಡೆ ನಡೆಸಿದ ದಾಳಿಯಲ್ಲಿ ನಾಗರಿಕರೊಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ದಾಳಿಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಮೊಹಮ್ಮದ್ ಸಲೀಮ್ ಅವಾನ್ (60ವರ್ಷ) ಎಂದು ಗುರುತಿಸಲಾಗಿದೆ.