ತ.ನಾ. ಉಪ ಮುಖ್ಯಮಂತ್ರಿಯಾಗಿ ಪನ್ನೀರಸೆಲ್ವಂ ಪ್ರಮಾಣ ವಚನ ಸ್ವೀಕಾರ
Team Udayavani, Aug 21, 2017, 5:25 PM IST
ಚೆನ್ನೈ : ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನ ಹೊಂದಿದಾಗ ಬೇರ್ಪಟ್ಟ ಎಐಎಡಿಎಂಕೆ ಪಕ್ಷದ ಎರಡು ಎದುರಾಳಿ ಬಣಗಳು ಇಂದು ವಿಲೀನಗೊಂಡ ಬೆನ್ನಿಗೇ ಬಂಡುಕೋರ ನಾಯಕ ಓ ಪನ್ನೀರ ಸೆಲ್ವಂ ಅವರಿಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸಂಪುಟದ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದರು.
ಪನ್ನೀರ ಸೆಲ್ವಂ ಅವರು ತಾವು ಈ ಹಿಂದೆ ನಿರ್ವಹಿಸಿಕೊಂಡಿದ್ದ ಹಣಕಾಸು ಸಚಿವ ಪದವನ್ನು ಇದೀಗ ಮತ್ತೆ ಗಳಿಸಿದ್ದಾರೆ.
ಜಯಲಲಿತಾ ಅವರು ಜೈಲಿಗೆ ಹೋಗಿದ್ದಾಗ ಎರಡು ಬಾರಿ ಮತ್ತು ನಿಧನ ಹೊಂದಿದಾಗ ಒಂದು ಬಾರಿ ಪನ್ನೀರ ಸೆಲ್ವಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಅವರು ಜಯಲಲಿತಾ ಅವರ ದೀರ್ಘಕಾಲೀನ ನಿಕಟವರ್ತಿ ವಿ ಕೆ ಶಶಿಕಲಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ ಕಾರಣಕ್ಕೆ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದ್ದರು.
ಪಳನಿಸ್ವಾಮಿ ಅವರ ನಿಕಟವರ್ತಿ ಕೆ ಪಾಂಡ್ಯರಾಜನ್ ಅವರು ತಮಿಳು ಅಧಿಕೃತ ಭಾಷೆ ಮತ್ತು ಸಂಸ್ಕೃತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.