ಉತ್ತರದಲ್ಲಿ ವಿಕಾಸ್ ಕಿ ಗಂಗಾ
Team Udayavani, Dec 5, 2021, 6:30 AM IST
ಹೊಸದಿಲ್ಲಿ: ಚುನಾವಣ ಹೊಸ್ತಿಲಲ್ಲಿರುವ ಉತ್ತರಾ ಖಾಂಡದಲ್ಲಿ ಅಂದಾಜು 18,000 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಚಾಲನೆ ನೀಡಿದರು.
ಈ ಮೂಲಕ ಚುನಾವಣ ಪ್ರಚಾರಕ್ಕೂ ಚಾಲನೆ ನೀಡಿರುವ ಅವರು, “ದೇಶದ ನಾನಾ ಭಾಗ ಗಳನ್ನು ಸುಲಲಿತವಾಗಿ ಸಂಪರ್ಕಿಸುವಂಥ ಮಹತ್ವದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ಧವಾಗಿದೆ. ಇದೊಂದು ಮಹಾ
ಯಜ್ಞವಾಗಿದೆ. ಉತ್ತರಾಖಂಡ ದಲ್ಲಿ ಚಾಲನೆ ನೀಡಲಾಗಿರುವ ಈ ಮೂಲಸೌಕರ್ಯ ಕಾಮ ಗಾರಿಗಳು ಆ ಮಹಾಯಜ್ಞದ ಭಾಗವಾಗಿದೆ. ಉತ್ತರಾಖಂಡ ದಲ್ಲಿ “ವಿಕಾಸ್ ಕಿ ಗಂಗಾ’ ಹರಿಯುತ್ತಿದೆ” ಎಂದರು.
ಡೆಹ್ರಾಡೂನ್ನ ಖ್ಯಾತ ಪರೇಡ್ ಗ್ರೌಂಡ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾರಂಭದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಮೂಲ ಭೂತ ಸೌಕರ್ಯಗಳ ಕನಸನ್ನು ತ್ವರಿತವಾಗಿ ನನಸಾಗಿಸಲು ಈ ನಡೆಯುತ್ತಿರುವ ಕಾಮಗಾರಿ ಗಳ ವೇಗವನ್ನು ದುಪ್ಪಟ್ಟು, ಮೂರುಪಟ್ಟು ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇತ್ತೀಚೆಗೆ ಕೇದಾರ ನಾಥ ಅಭಿವೃದ್ಧಿಗಾಗಿ ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಾ ಗಿತ್ತು. ಅವೂ ಕೂಡ ಭರದಿಂದ ಸಾಗುತ್ತಿವೆ. 2019 ರಿಂದ ಅಲ್ಲಿ ಕಲ್ಪಿಸಲಾಗಿರುವ ವಿಶೇಷ ಸವಲತ್ತುಗಳಿಂದಾಗಿ ಈವರೆಗೆ ಅಲ್ಲಿ 10 ಲಕ್ಷ ಭಕ್ತರು ಬಂದು ಹೋಗುವಂತಾಗಿದೆ’ ಎಂದು ಅವರು ತಿಳಿಸಿದರು.
“ವಿಕಾಸ್ ಕಿ ಗಂಗಾ’: “ಉತ್ತರಾಖಂಡದ ಅಭಿವೃದ್ಧಿಗಾಗಿ ಕಳೆದ ಏಳೂವರೆ ವರ್ಷಗಳಲ್ಲಿ ಕೇಂದ್ರ ಸರಕಾರ 12,000 ಕೋಟಿ ರೂ.ಗಳನ್ನು ಈವರೆಗೆ ಖರ್ಚು ಮಾಡಿದೆ. ಉತ್ತರಾಖಂಡದಲ್ಲಿ ಇಂಥ ಮಹತ್ವದ ಯೋಜನೆಗಳು ಜಾರಿಗೊಳ್ಳು ತ್ತಿರುವ ಹಿನ್ನೆಲೆಯಲ್ಲಿ ಈ ದಶಕವನ್ನು ಉತ್ತರಾಖಾಂಡದ ದಶಕ ಎಂದು ಕರೆಯಲಡ್ಡಿಯಿಲ್ಲ. ಇಲ್ಲಿನ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರಕಾರವೇ ಇರುವುದರಿಂದ “ಡಬಲ್ ಎಂಜಿನ್’ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯ ಗಳು ಭರದಿಂದ ಸಾಗುತ್ತಿವೆ’ ಎಂದರಲ್ಲದೆ, “ಉತ್ತರಾಖಂಡವನ್ನು ಆಳಿದ ಹಿಂದಿನ ಯಾವುದೇ ಸರಕಾರಗಳು ಈ ಮಟ್ಟದ ಅಭಿ ವೃದ್ಧಿಯನ್ನು ಈ ರಾಜ್ಯದಲ್ಲಿ ಮಾಡಿಲ್ಲ’ ಎಂದರು.
ವನ್ಯಜೀವಿಗಳಿಗೆ ರಕ್ಷಣೆ, ಪ್ರವಾಸಿಗರಿಗೆ ಆಕರ್ಷಣೆ!:
ಉತ್ತರಾಖಂಡದಲ್ಲಿ ಪ್ರಧಾನಿ ಮೋದಿಯವರು ಶನಿವಾರ ಚಾಲನೆ ನೀಡಿದ 18,000 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ದಿಲ್ಲಿ-ಡೆಹ್ರಾಡೂನ್ ಮಧ್ಯೆ ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ಕೂಡ ಒಂದು. ಇದು ದೇಶದ ಮೊದಲ ವನ್ಯಜೀವಿ ಕಾರಿಡಾರ್ ಎಂಬ ಕೀರ್ತಿ ಪಡೆದಿದೆ. ಇದು ನಿರ್ಮಾಣವಾದ ಅನಂತರ ಇದರ ಮೂಲಕ ಡೆಹ್ರಾಡೂನ್ ಮತ್ತು ಮಸ್ಸೂರಿಗೆ ತೆರಳುವ ಪ್ರವಾಸಿಗರಿಗೆ ಪ್ರಕೃತಿಯ ಅದಮ್ಯ ಸೌಂದರ್ಯವನ್ನು ಸವಿಯುವ ಸದವಕಾಶ ದೊರೆಯಲಿದೆ. 16 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ನಲ್ಲಿ ಥ್ರಿಲ್ಲಿಂಗ್ ಅನುಭವ ಸಿಗಲಿದೆ. ಅಷ್ಟೇ ಅಲ್ಲ, ವೇಗವಾಗಿ ಸಾಗುವ ವಾಹನಗಳಡಿ ಸಿಲುಕಿ ವನ್ಯಜೀವಿಗಳು ಸಾವಿಗೀಡಾಗುವಂಥ ದುರ್ಘಟನೆಗಳೂ ತಪ್ಪಲಿವೆ.
ಹೇಗಿರಲಿದೆ ಈ ಕಾರಿಡಾರ್? :
ದಿಲ್ಲಿ-ಸಹರಾನ್ಪುರ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ನ ಪ್ರಮುಖ ಆಕರ್ಷಣೆಗಳಲ್ಲಿ ಈ ವನ್ಯಜೀವಿ ಕಾರಿಡಾರ್ ಕೂಡ ಒಂದು.. 16 ಕಿ.ಮೀ.ನ ಈ ಕಾರಿಡಾರ್ ಅನ್ನು ಎರಡು ಸೆಕ್ಷನ್ನಲ್ಲಿ ನಿರ್ಮಿಸಲಾಗುತ್ತದೆ. ಈ ಕಾರಿಡಾರ್ನಿಂದಾಗಿ ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣ ಅವಧಿಯು 150 ನಿಮಿಷಗಳಷ್ಟು ಕಡಿತವಾಗಲಿದೆ. ಶಿವಾಲಿಕ್ ಅರಣ್ಯಪ್ರದೇಶದ ಮಧ್ಯೆ ಈ ಕಾರಿಡಾರ್ ಹಾದು ಹೋಗಲಿದ್ದು, ಸದ್ಯ ಇರುವ ದ್ವಿಪಥ ಹೆದ್ದಾರಿಯನ್ನು ಪ್ರಾಣಿಗಳ ಮುಕ್ತ ಸಂಚಾರಕ್ಕೆಂದು ಬಿಟ್ಟುಕೊಡಲು ನಿರ್ಧರಿಸಲಾಗಿದೆ.
ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು :
ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಉತ್ತರಾಖಂಡದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಬರೋಬ್ಬರಿ 18 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿ ದ್ದಾರೆ. ದಿಲ್ಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇ, ಬದ್ರಿನಾಥ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸೇರಿದಂತೆ 15,728 ಕೋಟಿ ರೂ.ಗಳ 11 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, 2,573 ಕೋಟಿ ರೂ. ಮೊತ್ತದ 7 ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.
ಅನುಕೂಲತೆಯೇನು? :
- ವನ್ಯಜೀವಿ ಕಾರಿಡಾರ್ ಈ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾಗಲಿದೆ
- ಹೆದ್ದಾರಿಯಲ್ಲಿ ಹೋಗುವ ವಾಹನಗಳಡಿ ಸಿಲುಕಿ ವನ್ಯಮೃಗಗಳು ಸಾವನ್ನಪ್ಪುವುದು ತಪ್ಪಲಿದೆ
- ದಿಲ್ಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣ ಅವಧಿ ಕಡಿತಗೊಳ್ಳಲಿದೆ.