ದೇಶದ ಆರ್ಥಿಕತೆ ಹೇಗಿದೆ? ಯೂನಿರ್ವಸಿಟಿಯಲ್ಲಿ ಪ್ರಧಾನಿಗೆ ಮಾತನಾಡೋ ಧೈರ್ಯ ಇಲ್ಲ: ರಾಹುಲ್
ಕಳೆದ 50ವರ್ಷಗಳಲ್ಲಿಯೇ ಭಾರತ ಕಂಡರಿಯದಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಯಾಕೆ ಕಂಡಿದೆ
Team Udayavani, Jan 13, 2020, 6:39 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯೂನಿರ್ವಸಿಟಿಯಲ್ಲಿರುವ ವಿದ್ಯಾರ್ಥಿಗಳ ಜತೆ ದೇಶದ ಆರ್ಥಿಕತೆ ಯಾಕೆ ದುರಂತದತ್ತ ಹೊರಳುವಂತಾಗಿದೆ ಎಂಬುದಾಗಿ ಧೈರ್ಯದಿಂದ ಮಾತನಾಡಬೇಕು ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿಯವರಿಗೆ ಹಾಗೇ ಮಾಡುವ ಧೈರ್ಯ ಇಲ್ಲ ಎಂಬುದಾಗಿ ಟೀಕಿಸಿದ್ದಾರೆ.
ಸಿಎಎ ಮೂಲಕ ದೇಶವನ್ನು ಇಬ್ಭಾಗವಾಗಿಸುವ ಮೂಲಕ ಪ್ರಧಾನಿ ಮೋದಿ ದೊಡ್ಡ ಹಾನಿ ಮಾಡಿದ್ದಾರೆ. ಅಲ್ಲದೇ ಜನರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ ಎಂದು 20 ವಿಪಕ್ಷಗಳ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ರಾಹುಲ್ ಸುದ್ದಿಗಾರರ ಜತೆ ಮಾತನಾಡಿದರು.
ದೇಶದ ಆರ್ಥಿಕ ಸ್ಥಿತಿ ಯಾಕೆ ಅಧಃಪತನದತ್ತ ಹೋಗುತ್ತಿದೆ ಎಂಬ ಬಗ್ಗೆ ವಿವಿಗಳಲ್ಲಿ ಇರುವ ಯುವ ಸಮೂಹದ ಮುಮದೆ ಧೈರ್ಯದಿಂದ ಮಾತನಾಡಬೇಕಾಗಿದೆ. ಕಳೆದ 50ವರ್ಷಗಳಲ್ಲಿಯೇ ಭಾರತ ಕಂಡರಿಯದಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಯಾಕೆ ಕಂಡಿದೆ ಎಂಬ ಬಗ್ಗೆ ಉತ್ತರಿಸಬೇಕು ಎಂದು ಗಾಂಧಿ ಹೇಳಿದರು.
ಇಂದು ನಡೆದ ಸಭೆಯಲ್ಲಿ ಎನ್ ಸಿಪಿ ವರಿಷ್ಠ ಶರದ್ ಪವಾರ್, ಎಡಪಕ್ಷದ ಸೀತಾರಾಮ್ ಯೆಚೂರಿ ಮತ್ತು ಡಿ.ರಾಜಾ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್, ಎಲ್ ಜೆಡಿ ಮುಖ್ಯಸ್ಥ ಶರದ್ ಯಾದವ, ಉಪೇಂದ್ರ ಕುಶ್ವಾ, ಆರ್ ಜೆಡಿಯ ಮನೋಜ್ ಝಾ, ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಹಸ್ಸನೈನ್ ಮಸೂದಿ, ಗುಲಾಂ ನಬಿ ಆಜಾದಿ, ಅಹ್ಮದ್ ಪಟೇಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.