ನನಗೆ ಮತ್ತೆ ಮನ್ ಕಿ ಬಾತ್ ಹೇಳಲು ಅವಕಾಶ ಕೊಟ್ಟಿದ್ದೀರಿ : ಪ್ರಧಾನಿ
ಮೋದಿ 2.0 ಮೊದಲ ಮನ್ ಕಿ ಬಾತ್
Team Udayavani, Jun 30, 2019, 12:27 PM IST
ಹೊಸದಿಲ್ಲಿ: ಪ್ರಧಾನಿ ಯಾಗಿ 2 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಮತ್ತೆ ಆಕಾಶವಾಣಿ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ಆರಂಭಿಸಿದ್ದು, ಭಾನುವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಮನ್ ಕಿ ಬಾತ್ ಎನ್ನುವುದು ದೇಶದ ಜನತೆಗೆ ಕನ್ನಡಿ ಇದ್ದಹಾಗೆ, ಇಲ್ಲಿ ನಮ್ಮ ಏಕತೆ ಮಾತ್ರವಲ್ಲದೆ ಸಾಮರ್ಥ್ಯವನ್ನೂ ತೋರಬಹುದು .ಪ್ರತಿಯೊಬ್ಬ ನಾಗರಿಕರೂ ದೇಶದ ಅಭಿವೃದ್ಧಿಗಾಗಿ ಕೊಡುಗೆ ನೀಡುತ್ತಿದ್ದಾರೆ ಎಂದರು.
2014 ರಿಂದ 19 ರ ಅವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಾವು ಬದ್ಧರಾಗಿದ್ದೇವೆ ಎಂದರು.
ನಾನು ಕಳೆದ ಅವಧಿಯ ಕೊನೆಯ ಮನ್ ಕಿ ಬಾತ್ನಲ್ಲಿ ಮತ್ತೆ ವಾಪಾಸ್ ಬರುವುದಾಗಿ ಹೇಳಿದ್ದೆ, ಆದರೆ ನಾನು ಬಂದಿಲ್ಲ ನೀವೆಲ್ಲಾ ನನ್ನನ್ನು ಕರೆ ತಂದಿದ್ದೀರಿ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದರು.
61 ಕೋಟಿ ಗೂ ಹೆಚ್ಚು ಜನ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಇದು ಅಮೆರಿಕಾ ಸೇರಿದಂತೆ ಕೆಲ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಿನದ್ದು, ಇದು ನಮ್ಮ ದೇಶದ ಅಗಾಧತೆ ಮತ್ತು ವೈವಿಧ್ಯತೆಯನ್ನು ಸೂಚಿಸುತ್ತದೆ ಎಂದರು.
ಚುನಾವಣೆಯನ್ನು ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಪ್ರತಿಯೊಬ್ಬ ಮತದಾರನಿಗೂ ನನ್ನ ಸೆಲ್ಯೂಟ್ ಎಂದರು.
ನಾನು ಚುನಾವಣೆ ಬಳಿಕ ಕೇದಾರನಾಥಕ್ಕೆ ಯಾತ್ರೆ ಮಾಡಿದ್ದೆ ಆದರೆ ಕೆಲವರು ಅದನ್ನು ರಾಜಕೀಯಗೊಳಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ನೀರಿನ ಸಂರಕ್ಷಣೆಗೆ ಕರೆ ನೀಡಿದ ಪ್ರಧಾನಿ , ದೇಶದ ವಿವಿಧೆಡೆ ನೀರಿನ ಅಭಾವವಿದ್ದು, ಎಲ್ಲರೂ ಜಲ ಸಂರಕ್ಷಣೆಗೆ ಆಧ್ಯತೆ ನೀಡಬೇಕು ಎಂದರು.