ಸೆಪ್ಟಂಬರ್ ತಿಂಗಳನ್ನು ಎದುರು ನೋಡುತ್ತಿದ್ದೇನೆ : ಪ್ರಧಾನಿ ಮನ್ ಕಿ ಬಾತ್
Team Udayavani, Jul 28, 2019, 2:07 PM IST
ನವದೆಹಲಿ: ಮೊನ್ನೆ ತಾನೆ ಭಾರತೀಯ ವಿಜ್ಞಾನಿಗಳು ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ರಾಕೆಟ್ ಉಡಾವಣೆ ಮಾಡಿರುವ ಸಾಧನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ಶ್ಲಾಘಿಸಿದ್ದಾರೆ.
ಆದಿತ್ಯವಾರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ಪ್ರಧಾನಿಯವರು ಚಂದ್ರಯಾನ -2 ರ ಯಶಸ್ಸಿಗಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ದೇಶವಾಸಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ‘ಚಂದ್ರಯಾನ-2ರ ಕುರಿತಾಗಿ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುತ್ತಾರೆ ಮತ್ತು 2019ನೇ ಇಸವಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಶುಭಫಲವನ್ನೇ ತಂದುಕೊಟ್ಟಿದೆ’ ಎಂದು ಅವರು ಹೇಳಿದರು.
ಚಂದ್ರಯಾನ-2ಕ್ಕೆ ಆರಂಭಿಕ ಹಿನ್ನಡೆ ಎದುರಾದರೂ ಆ ಬಳಿಕ ಅದನ್ನು ಸರಿಪಡಿಸಿಕೊಂಡು ಕಳೆದ ಸೋಮವಾರದಂದು ಚಂದ್ರಯಾನ-2ರ ಉಡ್ಡಯನ ಯಶಸ್ವಿಯಾಗಿತ್ತು. ಇನ್ನು ಸೆಪ್ಟಂಬರ್ ತಿಂಗಳಿನಲ್ಲಿ ಈ ರಾಕೆಟ್ ಚಂದ್ರನ ಅಂಗಳವನನ್ನು ತಲುಪಲಿದೆ. ಹಾಗಾಗಿ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.