ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣವಾದ ಕೊಲ್ಕತ್ತಾ ಪೋರ್ಟ್ ಟ್ರಸ್ಟ್
ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ; ಸಮಾರಂಭದಿಂದ ದೂರವೇ ಉಳಿದ ಮಮತಾ ಬ್ಯಾನರ್ಜಿ
Team Udayavani, Jan 12, 2020, 1:35 PM IST
ಕೋಲ್ಕತ್ತಾ: ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕೊಲ್ಕತ್ತಾ ಪೋರ್ಟ್ ಟ್ರಸ್ಟ್ ಅನ್ನು ಭಾರತೀಯ ಜನಾ ಸಂಘದ (ಈಗಿನ ಭಾರತೀಯ ಜನತಾ ಪಕ್ಷ) ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಎಂದು ಮರುನಾಮಕರಣ ಮಾಡಿದ್ದಾರೆ.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಮೂಲತಃ ಕೋಲ್ಕತ್ತದವರೇ ಆಗಿದ್ದಾರೆ. ಇಂದು ಕೋಲ್ಕತ್ತಾ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ.
ಡಾ. ಮುಖರ್ಜಿ ಅವರು ದಂತಕಥೆಯಾಗಿದ್ದು, ಅವರು ಅಭಿವೃದ್ಧಿಯ ನಾಯಕರಾಗಿದ್ದರು ಮತ್ತು ‘ಏಕ ರಾಷ್ಟ್ರ, ಏಕ ಸಂವಿಧಾನ’ ಕಲ್ಪನೆಗಾಗಿ ಮುಂಚೂಣಿಯಲ್ಲಿ ಹೋರಾಡಿದವರು. ಆ ಕಾರಣದಿಂದಲೇ ದೇಶದ ಬಹುಮುಖ್ಯ ಬಂದರಿಗೆ ಅವರ ಹೆಸರನ್ನಿಡಲಾಗಿದೆ ಎಂದರು.
ಈ ಬಂದರನ್ನು ಪೂರ್ವ ಭಾರತದ ಗೇಟ್ ವೇ ಎಂದು ಕರೆಯಲಾಗುತ್ತದೆ.
ಕೋಲ್ಕತ್ತ ಪೋರ್ಟ್ ಟ್ರಸ್ಟ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.