ಪಿಎನ್ಬಿ: ಚಂದಾ ಕೊಚರ್, ಶಿಖಾ ಶರ್ಮಾಗೆ ಸಮನ್ಸ್
Team Udayavani, Mar 7, 2018, 9:55 AM IST
ಹೊಸದಿಲ್ಲಿ: ಪಿಎನ್ಬಿ ಹಗರಣದ ತನಿಖೆ ನಡೆಸುತ್ತಿರುವ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ವಿಭಾಗ (ಎಸ್ಎಫ್ಐಒ) ಇದೀಗ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚರ್, ಆ್ಯಕ್ಸಿಸ್ ಬ್ಯಾಂಕ್ ಸಿಇಒ ಶಿಖಾ ಶರ್ಮಾ ಸೇರಿದಂತೆ 31 ಬ್ಯಾಂಕ್ಗಳ ಮುಖ್ಯಸ್ಥರಿಗೆ ಸಮನ್ಸ್ ನೀಡಿದೆ. ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಗೀತಾಂಜಲಿ ಜ್ಯುವೆಲ್ಲರ್ಸ್ ಪ್ರವರ್ತಕ ಮೆಹುಲ್ ಚೋಸ್ಕಿಗೆ ಬ್ಯಾಂಕ್ ಒಕ್ಕೂಟವು ಸಾಲ ನೀಡಿರುವ ಕುರಿತು ವಿವರ ಪಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅದಕ್ಕೆ ಪೂರಕವಾಗಿ ಮಂಗಳವಾರ ಆ್ಯಕ್ಸಿಸ್ ಬ್ಯಾಂಕ್ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಶ್ರೀನಿವಾಸ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಎಸ್ಎಫ್ಐಒ ಮುಂದೆ ಹಾಜರಾಗಿ, ಸಾಲ ನೀಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಐಸಿಐಸಿಐ ಬ್ಯಾಂಕ್ ನೇತೃತ್ವದಲ್ಲಿ ಖಾಸಗಿ ಕ್ಷೇತ್ರದ 31 ಬ್ಯಾಂಕ್ಗಳು ಗೀತಾಂಜಲಿ ಜ್ಯುವೆಲ್ಲರ್ಸ್ಗೆ ಸಾಲ ನೀಡಿದ್ದವು. ಹೀಗಾಗಿ ಪರಾರಿಯಾಗಿರುವ ಇಬ್ಬರು ವ್ಯಕ್ತಿಗಳ ಸಂಸ್ಥೆಗಳ ಜತೆಗೆ ಇದ್ದ ವಹಿವಾಟಿನ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಎಸ್ಎಫ್ಐಒ ಬ್ಯಾಂಕ್ಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಷೇರುಪೇಟೆ ಪತನ: ಪಿಎನ್ಬಿ ಹಗರಣ ಸಂಬಂಧ ಖಾಸಗಿ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕ 430 ಅಂಕಗಳಷ್ಟು ಕುಸಿತ ಕಂಡಿದೆ. ಹೀಗಾಗಿ ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್ಇ ಸೂಚ್ಯಂಕ ದಿನಾಂತ್ಯಕ್ಕೆ 33,209 ಮತ್ತು ನಿಫ್ಟಿ 10,249.25ರಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ಇ.ಡಿ.ಸಮನ್ಸ್ ವಿರುದ್ಧ ನೀರವ್ ಮೋದಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಪಾಸ್ಪೋರ್ಟ್ ವಿವರ ಪಡೆದುಕೊಳ್ಳಿ
ನೀರವ್, ಮಲ್ಯ ಪ್ರಕರಣದ ಬಳಿಕ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳ ಮುಖ್ಯಸ್ಥರಿಗೆ ವಿಶೇಷ ಸೂಚನೆಯೊಂ ದನ್ನು ನೀಡಲಾಗಿದೆ. 50 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಮಾಡಿರುವ ವ್ಯಕ್ತಿ ಗಳ ಪಾಸ್ಪೋರ್ಟ್ ವಿವರವನ್ನು 45 ದಿನಗಳ ಒಳಗಾಗಿ ಪಡೆದುಕೊಳ್ಳುವಂತೆ ಹಣಕಾಸು ಸಚಿವಾಲಯ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸೂಚಿಸಿದೆ. ಕಾರ್ಪೊ ರೇಟ್ ಕುಳಗಳಿಗೆ ಸಾಲ ನೀಡುವ ಅರ್ಜಿಯಲ್ಲಿ ಬದಲಾವಣೆ ಮಾಡಿ ಅವರ ಪಾಸ್ಪೋರ್ಟ್ ವಿವರಗಳನ್ನು ನಮೂದಿಸುವಂತೆ ಮಾಡಬೇಕು ಎಂದೂ ಸೂಚಿಸಲಾಗಿದೆ.