ಮಸೀದಿಯಲ್ಲಿ ಪ್ರಾರ್ಥನೆ: ಕೇಂದ್ರಕ್ಕೆ ನೋಟಿಸ್
Team Udayavani, Apr 17, 2019, 6:00 AM IST
ಹೊಸದಿಲ್ಲಿ: ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ. ನ್ಯಾಯ ಮೂರ್ತಿ ಎಸ್.ಎ. ಬೋಬ್ದೆ ನೇತೃತ್ವದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಈ ಸಂಬಂಧ ನೋಟಿಸ್ ನೀಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಶಬರಿಮಲೆ ಪ್ರಕರಣದಲ್ಲೂ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ಅವಕಾಶ ಮಾಡಿ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸ ಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿರುವ ಪದ್ಧತಿಯನ್ನು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಘೋಷಿ ಸಬೇಕು ಎಂಬುದಾಗಿ ಪುಣೆಯ ಜುಬೇರ್ ಮತ್ತು ಯಾಸ್ಮಿನ್ ಪೀರ್ಜಾದೆ ದಂಪತಿ ಆಗ್ರಹಿಸಿದ್ದಾರೆ. ಈ ವೇಳೆ ವಿದೇಶಗಳಲ್ಲಿ ಮಹಿಳೆಯರಿಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ವಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದಾಗ, ಪವಿತ್ರ ಮೆಕ್ಕಾದಲ್ಲಿ ಮಹಿಳೆಯರಿಗೆ ಮಸೀದಿಗೆ ತೆರಳಲು ಅವಕಾಶವಿದೆ ಎಂದು ದಂಪತಿ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ. ಶಬರಿಮಲೆ ವಿಚಾರವನ್ನು ಕೋರ್ಟ್ ಕೈಗೆತ್ತಿ ಕೊಂಡಿರುವುದರಿಂದ ಈ ಮನವಿ ಸ್ವೀಕರಿಸುತ್ತಿರುವುದಾಗಿ ಕೋರ್ಟ್ ಹೇಳಿದೆ.
ಆರಂಭಿಕ ಯತ್ನ ಯಶಸ್ವಿ: ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿರುವುದು ದಂಪತಿಗೆ ಸಂತಸ ತಂದಿದೆ. ನಾಲ್ಕು ವರ್ಷದ ಹಿಂದೆ ಮಸೀದಿಗೆ ಮಹಿಳೆಯರು ತೆರಳಲು ಅವಕಾಶ ನೀಡುವಂತೆ ಸ್ಥಳೀಯ ಮಸೀದಿಗೆ ವಿನಂತಿಸಿದ್ದೆವು. ಆದರೆ ಅವರು ಸಮ್ಮತಿಸಲಿಲ್ಲ. ಆಗ ಧರ್ಮ ಏನು ಹೇಳುತ್ತದೆ ಎಂಬುದನ್ನು ವಿಶ್ಲೇಷಿಸಿದ್ದೆವು ಎಂದಿದ್ದಾರೆ.