ಕೋವಿಡ್ ಕಾಟದ ನಡುವೆಯೂ ಈ ಬಾರಿ ಭರ್ಜರಿ ಭತ್ತದ ಬಿತ್ತನೆ
ಮುಂಗಾರು ಪೂರ್ವದ ಬೀಜ ಬಿತ್ತನೆ ಪ್ರಾರಂಭ ;ಕಳೆದ ವರ್ಷಕ್ಕಿಂತ 27 ಪ್ರತಿಶತ ಅಧಿಕ ಭತ್ತದ ಬಿತ್ತನೆ
Team Udayavani, Apr 10, 2020, 10:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ದೇಶದೆಲ್ಲೆಡೆ ಕೋವಿಡ್ ವೈರಸ್ ಸಂಬಂಧಿತ ಲಾಕ್ ಡೌನ್ ಸ್ಥಿತಿಯಲ್ಲಿ ಎಲ್ಲಾ ವ್ಯವಹಾರ ಚಟುವಟಿಕೆಗಳೂ ಕುಂಠಿತಗೊಂಡಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಿಂದ ಶುಭ ಸುದ್ದಿಯೊಂದು ಸಿಕ್ಕಿದೆ.
ಈ ಬಾರಿಯ ಮುಂಗಾರು ಪೂರ್ವ ಭತ್ತದ ಬಿತ್ತನೆ ಪ್ರಾರಂಭಗೊಂಡಿದ್ದು ಒಟ್ಟಾರೆಯಾಗಿ 32.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿದೆ. ಕಳೆದ ಋತುವಿಗೆ ಹೋಲಿಸಿದಲ್ಲಿ ಇದು ಒಟ್ಟಾರೆಯಾಗಿ 27 ಪ್ರತಿಶತ ಅಧಿಕ.
ದೇಶದಲ್ಲಿ ಸುಮಾರು 70 ಪ್ರತಿಶತ ಮಳೆಯಾಗುವ ನೈಋತ್ಯ ಮಾರುತ ಪ್ರಾರಂಭಗೊಳ್ಳುವ ಅವಧಿಯಲ್ಲಿ ಈ ಬಿತ್ತನೆ ನಡೆಯುತ್ತದೆ. ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳನ್ನು ಹೊರತುಪಡಿಸಿದರೆ ದೇಶದ ಪ್ರಮುಖ ವಾಣಿಜ್ಯ ಬೆಳೆ ಭತ್ತವಾಗಿದೆ. ಶುಕ್ರವಾರದಿಂದ ಮೊದಲ್ಗೊಂಡು ದೇಶದ ಭತ್ತ ಬೆಳೆಯುವ ಪ್ರಮುಖ ಭಾಗಗಳಲ್ಲಿ ರೈತರು ಸುಮಾರು 32.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಿದ್ದಾರೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.
ಪಶ್ವಿಮ ಬಂಗಾಲದಲ್ಲಿ 11.25 ಲಕ್ಷ ಹೆಕ್ಟೇರ್, ತೆಲಂಗಾಣದಲ್ಲಿ 7.5 ಲಕ್ಷ ಹೆಕ್ಟೇರ್, ಒಡಿಸ್ಸಾದಲ್ಲಿ 3.13 ಲಕ್ಷ ಹೆಕ್ಟೇರ್, ಅಸ್ಸಾಂನಲ್ಲಿ 2.73 ಲಕ್ಷ ಹೆಕ್ಟೇರ್, ಕರ್ನಾಟಕದಲ್ಲಿ 1.64 ಲಕ್ಷ ಹೆಕ್ಟೇರ್ ಮತ್ತು ಛತ್ತೀಸ್ ಗಢದಲ್ಲಿ 1.50 ಲಕ್ಷ ಹೆಕ್ಟೇರ್ ಗಳಲ್ಲಿ ಭತ್ತದ ಬಿತ್ತನೆಯಾಗಿರುವುದು ವರದಿಯಾಗಿದೆ.
ಇದರೊಂದಿಗೆ ತಮಿಳುನಾಡು (1.30 ಲಕ್ಷ ಹೆಕ್ಟೇರ್), ಬಿಹಾರ್ (1.22 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.65 ಲಕ್ಷ ಹೆಕ್ಟೇರ್), ಮಧ್ಯಪ್ರದೇಶ (0.59 ಲಕ್ಷ ಹೆಕ್ಟೇರ್), ಗುಜರಾತ್ (0.54 ಲಕ್ಷ ಹೆಕ್ಟೇರ್) ಮತ್ತು ಕೇರಳ (0.46 ಲಕ್ಷ ಹೆಕ್ಟೇರ್) ರಾಜ್ಯಗಳಲ್ಲೂ ಭತ್ತದ ಬಿತ್ತನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.