ಕುಸಿದು ಬಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ರಾಷ್ಟ್ರಪತಿ
Team Udayavani, Oct 29, 2019, 8:42 PM IST
ನವದೆಹಲಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ದಿಢೀರ್ ಕುಸಿದು ಬಿದ್ದ ಮಹಿಳಾ ಪೊಲೀಸ್ ರಕ್ಷಣೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಮಾನಾಥ್ ಕೋವಿಂದ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧಾವಿಸಿದ ಪ್ರಸಂಗ ನಡೆಯಿತು.
ದೆಹಲಿಯ ವಿದ್ಯಾಭವನದಲ್ಲಿ ಮಂಗಳವಾರ ಪ್ರಥಮ ರಾಷ್ಟ್ರೀಯ ಸಿಎಸ್ಆರ್ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ, ವೇದಿಕೆ ಮುಂಭಾಗದಲ್ಲಿದ್ದ ಮಹಿಳಾ ಪೊಲೀಸ್ ಪೇದೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ರಾಷ್ಟ್ರಗೀತೆ ಪೂರ್ಣಗೊಂಡ ಕೂಡಲೇ ಸ್ಥಳಕ್ಕೆ ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಧಾವಿಸಿ ಆಕೆಗೆ ಕುಡಿವ ನೀರಿನ ಬಾಟಲಿ ನೀಡಿದರು. ಇವರನ್ನು ಹಿಂಬಾಲಿಸಿದ ರಾಷ್ಟ್ರಪತಿ ರಮಾನಾಥ್ ಕೋವಿಂದ್, ನಿರ್ಮಲಾ ಸೀತಾರಾಮನ್ ಕೂಡ ಮಹಿಳೆಯ ಯೋಗ ಕ್ಷೇಮ ವಿಚಾರಿಸಿದರು. ಗಣ್ಯರ ಈ ಔದಾರ್ಯಕ್ಕೆ ವೇದಿಕೆಯಲ್ಲಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.