ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಪಕ್ಷಗಳಲ್ಲೇ ಒಡಕು! ಸೋಮವಾರ ಸಿನ್ಹಾ ನಾಮಪತ್ರ ಸಲ್ಲಿಕೆ
Team Udayavani, Jun 26, 2022, 6:55 AM IST
ಹೊಸದಿಲ್ಲಿ: ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶ ವಂತ್ ಸಿನ್ಹಾ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಒಮ್ಮತದ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ಸಾಹಸ ಪಟ್ಟಿದ್ದ ವಿಪಕ್ಷಗಳಲ್ಲೇ ಈಗ ಒಡಕು ಮೂಡಿರುವ ಸುಳಿವು ಗೋಚರಿಸುತ್ತಿದೆ.
ಎನ್ಡಿಎ ತನ್ನ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಹೆಸರು ಘೋಷಿಸಿ ವಿಪಕ್ಷಗಳನ್ನು ಗೊಂದಲಕ್ಕೆ ಸಿಲುಕಿಸಿದೆ. ಎಲ್ಲ ರಾಜಕೀಯ ಪಕ್ಷ ಗಳೊಂದಿಗೆ ಸಿನ್ಹಾಗೆ ಒಡನಾಟ ದಿಂದಾಗಿ ಹಲವು ಪ್ರಾದೇಶಿಕ ಪಕ್ಷಗಳು ಸಿನ್ಹಾ ಪರ ಮತ ಚಲಾಯಿಸಲಿವೆ ಎಂಬ ವಿಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಅಲ್ಲದೇ ತಮ್ಮ ಗುಂಪಿನಲ್ಲಿರುವ ಪಕ್ಷ ಗಳೇ ಎನ್ಡಿಎ ಅಭ್ಯರ್ಥಿಯನ್ನು ಬೆಂಬ ಲಿಸುವ ಲಕ್ಷಣ ಕಾಣಿಸಿದೆ.
ಝಾರ್ಖಂಡ್ ಮುಕ್ತಿ ಮೋರ್ಚಾ ಈಗ ಏಕಾಏಕಿ ಮುರ್ಮು ಅವರನ್ನು ಬೆಂಬ ಲಿಸುವ ಕುರಿತು ಚಿಂತನೆ ನಡೆಸುತ್ತಿದೆ. ಬಿಎಸ್ಪಿ ನಾಯಕಿ ಮಾಯಾವತಿಯೂ “ನಮ್ಮ ಬೆಂಬಲ ದ್ರೌಪದಿಗೆ’ ಎಂದಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರು “ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಲು ಸೂಕ್ತ, ಅವಿವಾದಿತ ವ್ಯಕ್ತಿ’ ಎಂದು ಹೇಳಿ ರುವುದು ವಿಪಕ್ಷಗಳಲ್ಲಿ ಒಡಕು ಮೂಡಿರುವುದನ್ನು ಸ್ಪಷ್ಟಪಡಿಸಿದೆ. ಈ ನಡುವೆ ಶನಿವಾರ ಮುರ್ಮು ಅವರು ಜೆಎಂಎಂ ನಾಯಕ, ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗೆ ಕರೆ ಮಾಡಿ ತಮಗೆ ಬೆಂಬಲ ನೀಡಲು ಮನವಿ ಮಾಡಿದ್ದಾರೆ.