ಯುದ್ಧ ಸ್ಮಾರಕ ಲೋಕಾರ್ಪಣೆ
Team Udayavani, Feb 26, 2019, 12:30 AM IST
ಹೊಸದಿಲ್ಲಿ: ದೇಶ ಸ್ವತಂತ್ರಗೊಂಡ ಬಳಿಕದ ಯುದ್ಧದಲ್ಲಿ ಹುತಾತ್ಮರಾದ ಎಲ್ಲ 26 ಸಾವಿರ ಯೋಧರನ್ನು ಸ್ಮರಿಸುವ “ರಾಷ್ಟ್ರೀಯ ಯುದ್ಧ ಸ್ಮಾರಕ’ವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಿಲ್ಲಿಯಲ್ಲಿ ಉದ್ಘಾಟಿಸಿದರು. ಇಂಡಿಯಾ ಗೇಟ್ ಎದುರು 40 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಯುದ್ಧ ಸ್ಮಾರಕ ಯೋಜನೆಯನ್ನು ವಿಳಂಬಗೊಳಿಸಿದ್ದಕ್ಕೆ ಹಿಂದಿನ ಸರಕಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಸ್ಮಾರಕ ಸ್ತಂಭದ ಬುಡದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸ್ಮಾರಕಕ್ಕೆ ಮೋದಿ ಚಾಲನೆ ನೀಡಿದರು. ಇದೇ ವೇಳೆ ವಾಯುಪಡೆಯ ಹೆಲಿಕಾಪ್ಟರ್ಗಳ ಮೂಲಕ ಸ್ಮಾರಕಕ್ಕೆ ಪುಷ್ಪಾರ್ಚನೆ ಯನ್ನೂ ಮಾಡಲಾಯಿತು. “ಮಿಸ್ಸಿಂಗ್ ಮ್ಯಾನ್’ ಆಕಾರದಲ್ಲಿ ಹೆಲಿಕಾಪ್ಟರ್ಗಳು ಹಾರಾಟ ನಡೆಸಿದವು.
ಹಲವು ದಶಕಗಳಿಂದಲೂ ಈ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆ ಇತ್ತು. ಜನರ ಆಶೀರ್ವಾದದಿಂದಾಗಿ 2014ರಲ್ಲಿ ಆರಂಭಿಸಿ ಈಗ ಮುಗಿಸಿದ್ದೇವೆ ಎಂದು ಮೋದಿ ಹೇಳಿದರು. ಈ ಸಂದರ್ಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ 40 ಮಂದಿ ಸಿಆರ್ಪಿಎಫ್ ಯೋಧರಿಗೂ ಮೋದಿ ನಮನ ಸಲ್ಲಿಸಿದರು.
ಒಂದೇ ಕುಟುಂಬಕ್ಕೆ ಆದ್ಯತೆ
ಹಿಂದಿನ ಯುಪಿಎ ಸರಕಾರವನ್ನು ಟೀಕಿಸಿದ ಅವರು, ಕೆಲವು ವ್ಯಕ್ತಿಗಳಿಗೆ ತಮ್ಮ ಕುಟುಂಬವೇ ಪ್ರಥಮ ಆದ್ಯತೆಯಾಗಿರುತ್ತದೆ. ಭಾರತ ಅನಂತರದ ಆದ್ಯತೆಯಾಗಿರುತ್ತದೆ. ಹಿಂದಿನ ಸರಕಾರಗಳು ಸ್ವಹಿತಾಸಕ್ತಿಗೆ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸೇನೆಯನ್ನು ಬಳಸುತ್ತಿದ್ದವು. ಬೊಫೋರ್ಸ್ನಿಂದ ಹೆಲಿ ಕಾಪ್ಟರ್ ವರೆಗಿನ ಎಲ್ಲ ಡೀಲ್ಗಳಲ್ಲಿನ ಅವ್ಯವಹಾರವೂ ಒಂದು ಕುಟುಂಬದತ್ತ ಬೆರಳು ತೋರಿಸುತ್ತಿವೆ. ಇವರೇ ಈಗ ರಫೇಲ್ ಯುದ್ಧ ವಿಮಾನ ದೇಶಕ್ಕೆ ಬಾರದಂತೆ ತಡೆಯುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು. 2009ರಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿಸುವ ಬೇಡಿಕೆಯನ್ನು ಸೇನೆ ಇಟ್ಟಿತ್ತು. 2009ರಿಂದ 201 4ರ ವರೆಗೆ ಈ ಪ್ರಸ್ತಾವ ಅನು ಮೋದನೆ ಪಡೆದಿರಲಿಲ್ಲ. ನಮ್ಮ ಸರಕಾರ 2.30 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿಸಿದೆ ಎಂದು ಮೋದಿ ಹೇಳಿ ದರು. ನಿವೃತ್ತ ಯೋಧರನ್ನುದ್ದೇಶಿಸಿ ಮಾತನಾಡಿದ ಮೋದಿ, ಯೋಧರಿಗಾಗಿ 3 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಘೋಷಣೆ ಮಾಡಿದರು.
ಯುದ್ಧ ಸ್ಮಾರಕದ ವೈಶಿಷ್ಟ್ಯ
1960ರಿಂದಲೂ ಪ್ರಸ್ತಾವ ರೂಪದಲ್ಲಿದ್ದ ರಾಷ್ಟ್ರೀಯ ಯುದ್ಧ ಸ್ಮಾರಕ ಈಗ ಅಸ್ತಿತ್ವಕ್ಕೆ ಬಂದಿದೆ. ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಅನಂತರ 2015ರಲ್ಲಿ ಅಂದರೆ 55 ವರ್ಷಗಳ ಬಳಿಕ ಈ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಸ್ಮಾರಕದಲ್ಲಿ ದೇಶದ ರಕ್ಷಣೆಗಾಗಿ ಮಡಿದ ಯೋಧರನ್ನು ಸ್ಮರಿಸಲಾಗಿದೆ. ಒಟ್ಟು 25,942 ವೀರ ಯೋಧರ ನೆನಪನ್ನು ಈ ಸ್ಮಾರಕದಲ್ಲಿ ಕೆತ್ತಲಾಗಿದೆ.
ಷಡ್ಬಜ ಆಕೃತಿಯಲ್ಲಿ ಒಟ್ಟು 16 ಗೋಡೆಗಳ ನಿರ್ಮಾಣ
ಮಧ್ಯದಲ್ಲಿ 15 ಮೀಟರ್ ಎತ್ತರದಲ್ಲಿ ಸ್ಮಾರಕ ಸ್ತಂಭ
ಇದರಲ್ಲಿ ಭಿತ್ತಿಚಿತ್ರ, ಗ್ರಾಫಿಕ್ ಪ್ಯಾನೆಲ್, ಹುತಾತ್ಮ ಯೋಧರ ಹೆಸರು, 21 ಪರಮವೀರ ಚಕ್ರ ಪುರಸ್ಕೃತರ ಪ್ರತಿಮೆ
ಅಮರ ಚಕ್ರ, ವೀರ ಚಕ್ರ, ತ್ಯಾಗ ಚಕ್ರ, ರಕ್ಷಕ ಚಕ್ರ ಎಂಬ ನಾಲ್ಕು ಚಕ್ರಗಳನ್ನು ಆಧರಿಸಿದೆ ಸ್ಮಾರಕ
ಹೊರ ಗೋಡೆ ರಕ್ಷಕ ಚಕ್ರದಲ್ಲಿ 600ಕ್ಕೂ ಹೆಚ್ಚು ಮರಗಳು
ಗೋಡೆಗಳ ಮೇಲೆ 25,942 ಹುತಾತ್ಮರ ಹೆಸರುಗಳು, ಹುದ್ದೆ
ನಿರ್ಮಾಣ ವೆಚ್ಚ 176 ಕೋಟಿ ರೂ.
1972ರ ಭಾರತ-ಚೀನ ಯುದ್ಧ, 1947, 1965 ಮತ್ತು 1971ರ ಭಾರತ- ಪಾಕ್ ಯುದ್ಧ, ಶ್ರೀಲಂಕಾಕ್ಕೆ ತೆರಳಿದ್ದ ಶಾಂತಿ ಪಡೆ ಮತ್ತು 1999ರ ಕಾರ್ಗಿಲ್ ಯುದ್ಧದ ನೆನಪು
ಇಂಡಿಯಾ ಗೇಟ್ ಎದುರಿನಲ್ಲೇ ಇದೆ ರಾಷ್ಟ್ರೀಯ ಯುದ್ಧ ಸ್ಮಾರಕ 2018 ಫೆಬ್ರವರಿಯಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿ ಒಂದು ವರ್ಷದ ದಾಖಲೆ ಸಮಯದಲ್ಲಿ ಪೂರ್ಣ