ಖಾಸಗಿ ಪರಿಪೂರ್ಣವಲ್ಲ: ಸು.ಕೋರ್ಟ್
Team Udayavani, Jul 20, 2017, 7:10 AM IST
ಹೊಸದಿಲ್ಲಿ: ಖಾಸಗಿತನವೆಂಬುದೂ ಒಂದು ಮೂಲಭೂತ ಹಕ್ಕೇ? ಸದ್ಯಕ್ಕೆ ಈ ಬಗ್ಗೆ ಸುಪ್ರೀಂಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ನಿಖರವಾಗಿ ಏನನ್ನೂ ಹೇಳದಿದ್ದರೂ, ಖಾಸಗಿತನ ಪರಿಪೂರ್ಣವಲ್ಲ ಎಂದು ಹೇಳಿದೆ. ಅಂದರೆ ಖಾಸಗಿ ಹಕ್ಕು ಒಂದು ಅಗೋಚರ ಹಕ್ಕು ಎನ್ನಬಹುದಷ್ಟೇ ಎಂದ ಪೀಠ, ಇದು ಪರಿಪೂರ್ಣ ಎಂದು ಭಾವಿಸಬೇಕಾಗಿಲ್ಲ ಎಂದಿದೆ. ಅಂದರೆ ನಮ್ಮ ಖಾಸಗಿತನವನ್ನು ಯಾರ ಬಳಿಯೂ ಬಿಟ್ಟುಕೊಡುವುದಿಲ್ಲವೆಂದು ಹೇಳುವುದು ಕಷ್ಟವಾಗುತ್ತದೆ. ಸರಕಾರಗಳು ಜನರ ಖಾಸಗಿತನದ ಕೊಂಚ ಮಟ್ಟಿನ ವಿವರವನ್ನು ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರ ಸೌಲಭ್ಯ ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿರುವ ಕೆಲ ಎನ್ಜಿಓಗಳು ಇದರಿಂದ ಜನರ ಖಾಸಗಿತನ ನಾಶವಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಈ ಹಿಂದಿನ 1954 ಮತ್ತು 1963ರ ಖಾಸಗಿ ಹಕ್ಕು ಕುರಿತ ಸುಪ್ರೀಂಕೋರ್ಟ್ನ ಸಂವಿಧಾನಪೀಠಗಳು ನೀಡಿರುವ ತೀರ್ಪಿನ ಮರುಪರಿಶೀಲನೆಗೂ ಅರ್ಜಿ ಸಲ್ಲಿಸಲಾಗಿದೆ. ಇದೀಗ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭವಾಗಿದ್ದು, ಈ ಸಂದರ್ಭದಲ್ಲೇ ಕೆಲವೊಂದು ಅಭಿಪ್ರಾಯಗಳು ಬಂದಿವೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್, ನ್ಯಾ| ಜೆ. ಚಲಮೇಶ್ವರ್, ನ್ಯಾ| ಎಸ್.ಎ.ಬೋಬೆx, ನ್ಯಾ| ಆರ್.ಕೆ.ಅಗರ್ವಾಲ್, ನ್ಯಾ| ರೋಹಿಂಗ್ಟನ್ ಫಾಲಿ ನಾರಿಮನ್, ನ್ಯಾ. ಅಭಯ್ ಮನೋಹರ್ ಸಾಪ್ರ, ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಎಸ್.ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣಿಯನ್, ಸೋಲಿ ಸೋರಾಬ್ಜಿ ಮತ್ತು ಶ್ಯಾಮ್ ದಿವಾನ್ ವಾದ ಮಂಡಿಸುತ್ತಿದ್ದಾರೆ.
ಖಾಸಗಿ ಹಕ್ಕಿನ ಬಗ್ಗೆ ಇರುವ ಎಲ್ಲ ಅನುಮಾನಗಳನ್ನು ಬಗೆಹರಿಸುವ ಸಲುವಾಗಿ ಎಲ್ಲ ಆಯಾಮಗಳಿಂದರೂ ನೋಡಲಾಗುವುದು. ಇದಕ್ಕೆ ಕೇಂದ್ರ ಸರಕಾರ ಹಾಗೂ ಇತರರು ಸಹಕಾರ ನೀಡಬೇಕು ಎಂದು ಕೋರ್ಟ್ ಸೂಚಿಸಿತು.
ವಿಚಾರಣೆಯ ಬಹುಮುಖ್ಯ ಅಂಶವೇ ಖಾಸಗಿ ಹಕ್ಕು. ಜನರಿಗೆ ಖಾಸಗಿ ಹಕ್ಕು ಎಂಬುದು ಸಂವಿಧಾನ ಕಲ್ಪಿಸಿರುವ ಅವಕಾಶವೇ ಎಂಬುದಾಗಿದೆ. ಗೋಪಾಲ್ ಸುಬ್ರಮಣಿಯನ್ ಅವರು ಸಂವಿಧಾನದಲ್ಲೇ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಉಲ್ಲೇಖೀಸಲಾಗಿದೆ. ಇದರಲ್ಲೇ ಖಾಸಗಿತನವೂ ಸೇರಿದ್ದು ಇದು ಸ್ವಾಭಾವಿಕವಾಗಿ ಬಂದದ್ದು ಎಂದಿದ್ದಾರೆ. ಅಲ್ಲದೆ ಖಾಸಗಿ ಎಂಬುದು ವ್ಯಕ್ತಿಯ ಜತೆಜತೆಗೇ ಇರುವಂಥದ್ದು ಮತ್ತು ಅನುವಂಶಿಕವಾಗಿ ಬಂದದ್ದು ಎಂದು ಹೇಳಿದರು. ಈ ಸಂದರ್ಭದಲ್ಲೇ ಅವರು 1954ರ ಎಂಟು ನ್ಯಾಯಮೂರ್ತಿಗಳ ಪೀಠ ಮತ್ತು 1963ರ ಆರು ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ ಖಾಸಗಿ ಹಕ್ಕು, ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಸರಿಯಲ್ಲ ಎಂದು ವಾದಿಸಿದರು.
ಈ ಮಧ್ಯೆ ಖಾಸಗಿ ಹಕ್ಕನ್ನೂ ಮೂಲಭೂತ ಹಕ್ಕನ್ನಾಗಿ ಪರಿವರ್ತಿಸಿದರೆ ಸಲಿಂಗ ವಿವಾಹ ಕುರಿತಂತೆ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಬಿದ್ದು ಹೋಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ ಈ ಬಗ್ಗೆಯೂ ವಿಚಾರಣೆ ವೇಳೆ ಪರಿಶೀಲನೆ ಮಾಡಬೇಕಾಗಿ ಬರಬಹುದು ಎಂದು ಹೇಳಿತು.
ಖಾಸಗಿ ಹಕ್ಕಿನ ಬಗ್ಗೆ ತನ್ನದೇ ಮಾತುಗಳಲ್ಲಿ ವಿವರಿಸಿದ ಪೀಠ, ಮಗುವೊಂದಕ್ಕೆ ಜನ್ಮ ಕೊಡುವುದು ಪತಿ-ಪತ್ನಿಯರ ಖಾಸಗಿ ಹಕ್ಕು ಎಂದು ಹೇಳಿತು. ಆದರೆ, ಸರಕಾರ ರೂಪಿಸಿದ ಕಾನೂನಿನಂತೆ ಆ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸರಕಾರ ಆದೇಶಿಸುವುದರಿಂದ ನಮ್ಮ ಖಾಸಗಿ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿತು.
ಇದಷ್ಟೇ ಅಲ್ಲ, ಸಾಲ ಪಡೆವಾಗ ಬ್ಯಾಂಕುಗಳು ವೈಯಕ್ತಿಕ ಮಾಹಿತಿ ಕೇಳಿದಾಗ, ಖಾಸಗಿ ಹಕ್ಕಿನ ಅಡಿಯಲ್ಲಿ ಕೊಡುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎಂದಿತು. ಆದರೆ ಬೆಡ್ರೂಂ ಮತ್ತು ಲೈಂಗಿಕ ಆಸಕ್ತಿ ಖಾಸಗಿತನಕ್ಕೆ ಸೇರುತ್ತವೆ ಎಂದು ಹೇಳಿತು.
ಆದರೆ ಇಂದು ನಾವು ದತ್ತಾಂಶಗಳ ಯುಗದಲ್ಲಿ ವಾಸಿಸುತ್ತಿರುವುದರಿಂದ ನಮ್ಮ ಮಾಹಿತಿಯನ್ನು ಕಾಪಿಡುವುದು ಅಷ್ಟೇ ಪ್ರಮುಖವಾಗುತ್ತದೆ. ಇದನ್ನು ಬಯಲು ಮಾಡಿದರೆ, ಅಪರಾಧ ಕೃತ್ಯ, ತೆರಿಗೆ ತಪ್ಪಿಸುವಿಕೆ ಅಥವಾ ಇನ್ನಾವುದೇ ಕಾನೂನು ಬಾಹಿರ ಕೆಲಸಗಳಿಗೆ ಬಳಕೆಯಾಗಬಹುದು. ಹೀಗಾಗಿ, ದತ್ತಾಂಶಗಳ ಸುರಕ್ಷತೆಗೆ ಕಾನೂನು ಮಾಡಬಹುದು ಎಂದು ಹೇಳಿತು.
ಸರಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಖಾಸಗಿತನವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಸಾಧ್ಯವಿಲ್ಲ. ಅದು ನಮ್ಮ ಜೀವನದ ಹಕ್ಕು ಮತ್ತು ಸ್ವಾತಂತ್ರ್ಯದ ಜತೆಗೆ ಸೇರಿಕೊಂಡಿರುತ್ತದೆ ಎಂದರು. ಗುರುವಾರ ಕೂಡ ವಿಚಾರಣೆ ಮುಂದುವರಿಯಲಿದ್ದು, ವೇಣುಗೋಪಾಲ್ ಅವರೇ ವಾದ ಮುಂದುವರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ