ಸುಸ್ತಿದಾರರಿಗೆ ಆಸ್ತಿ ಜಪ್ತಿ ಬಿಸಿ: ಹೊಸ ಮಸೂದೆಗೆ ಕೇಂದ್ರ ಅನುಮೋದನೆ
Team Udayavani, Mar 2, 2018, 8:15 AM IST
ಹೊಸದಿಲ್ಲಿ: ಭಾರತದಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಮರುಪಾವತಿಸದೆ ದೇಶ ಬಿಟ್ಟು ಓಡಿ ಹೋಗುವ ಸಾಧ್ಯತೆಗಳಿಗೆ ಕಡಿವಾಣ ಹಾಕಲು ಈಗ ಕೇಂದ್ರ ಸಂಪುಟ ಮಹತ್ವದ ಮಸೂದೆಗೆ ಅನುಮೋದನೆ ನೀಡಿದೆ.
ಉದ್ಯಮಿ ವಿಜಯ್ ಮಲ್ಯ ಹಾಗೂ ಇತ್ತೀಚೆಗೆ ನಡೆದ ನೀರವ್ ಮೋದಿ ಪ್ರಕರಣದ ಬೆನ್ನಲ್ಲೇ ಇದನ್ನು ಮಟ್ಟ ಹಾಕಲು ಕೇಂದ್ರ ಸರಕಾರ ಮುಂದಾಗಿದೆ. ಒಂದು ವೇಳೆ, 100 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಅವ್ಯವಹಾರ ಮಾಡಿ, ವಿದೇಶಕ್ಕೆ ತೆರಳಿದರೆ ಅವರು ಸಾಲಕ್ಕೆ ಅಡವಿಟ್ಟ ಆಸ್ತಿಯ ಜತೆಗೆ, ಅವರ ಹೆಸರಿನಲ್ಲಿರುವ ಹಾಗೂ ಬೇನಾಮಿ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ವಿದೇಶಕ್ಕೆ ಓಡಿ ಹೋದರೂ ಅಲ್ಲಿರುವ ಆಸ್ತಿಯನ್ನೂ ಆ ದೇಶದ ನೆರವು ಪಡೆದು ಜಪ್ತಿ ಮಾಡಲಾಗುತ್ತದೆ.
ಇದು ವಿವಿಧ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ಸಾಲ ಮಾಡಿ ಸುಸ್ತಿದಾರರಾಗಿರುವ ವಿಜಯ್ ಮಲ್ಯ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ನಲ್ಲಿ 12,600 ಕೋಟಿ ರೂ. ಅವ್ಯವಹಾರ ನಡೆಸಿರುವ ನೀರವ್ ಮೋದಿಯಂಥವರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಮಸೂದೆಯಾಗಿದೆ. ಇದರಿಂದ ಬ್ಯಾಂಕ್ಗಳು ಉಸಿರಾಡುವಂತಾಗಲಿವೆ. ಪ್ರಸ್ತುತ ಕಾನೂನಿನಲ್ಲಿ ಅಡವಿಟ್ಟ ಆಸ್ತಿಯಷ್ಟನ್ನೇ ಬ್ಯಾಂಕ್ ಅಥವಾ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳಬಹು ದಾಗಿದ್ದು, ಇದರಿಂದ ಒಟ್ಟು ಸಾಲ ಹಾಗೂ ಬಡ್ಡಿ ಮೊತ್ತಕ್ಕೆ ಜಪ್ತಿ ಮಾಡಿದ ಆಸ್ತಿ ಮೌಲ್ಯವನ್ನು ಸರಿದೂಗಿಸುವುದು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗಿರುವುದಿಲ್ಲ. ಇಂಥ ಸನ್ನಿವೇಶವನ್ನು ತಪ್ಪಿಸಿಕೊಳ್ಳಲು ಉದ್ಯಮಿಗಳು ವಿದೇಶಕ್ಕೆ ಪರಾರಿಯಾಗುತ್ತಾರೆ. ಈ ಮಸೂದೆ ವಿವಿಧ ರೀತಿಯ ಹಣಕಾಸು ಅವ್ಯವಹಾರಗಳನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಹೊಸ ಪ್ರಕರಣದ ಜತೆಗೆ ಹಳೆ ಪ್ರಕರಣವೂ ಈ ಮಸೂದೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಅಮೆರಿಕದಲ್ಲೂ ಇದೆ ಕಾನೂನು: ಅಮೆರಿಕದಲ್ಲೂ ಇದೇ ರೀತಿಯ ಕಾನೂನು ಚಾಲ್ತಿಯಲ್ಲಿದ್ದು, ಭ್ರಷ್ಟಾಚಾರವನ್ನು ಗಮನದಲ್ಲಿರಿಸಿಕೊಂಡು ಅಲ್ಲಿ ಈ ರೀತಿಯ ಕಾನೂನು ಜಾರಿಗೆ ತರಲಾಗಿದೆ. ಹಣ ದುರ್ಬಳಕೆ ತಡೆ ಕಾನೂನು ಕೂಡ ಇದೇ ಅಂಶಗಳನ್ನು ಹೊಂದಿದ್ದರೂ, ಇದು ಅಪರಾಧ ಚಟುವಟಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಹೊಸ ಕಾನೂನು ಅಪರಾಧವೂ ಸೇರಿದಂತೆ, ಇತರ ಹಲವು ಉದ್ದೇಶಗಳ ಹಣಕಾಸು ಅವ್ಯವಹಾರವನ್ನು ಒಳಗೊಂಡಿರುತ್ತದೆ. ಮಸೂದೆಯಲ್ಲಿ ವಿಶೇಷ ನ್ಯಾಯಾಲಯವು ದುರುದ್ದೇಶಪೂರ್ವಕ ಹಣಕಾಸು ಸುಸ್ತಿದಾರ ಎಂದು ಘೋಷಿಸಬಹುದಾಗಿದೆ.
ಪ್ರಾಧಿಕಾರ ಸ್ಥಾಪನೆ: ಈ ಮಸೂದೆಯನ್ನು ಫುಜಿಟಿವ್ ಎಕನಾಮಿಕ್ ಒಫೆಂಡರ್ಸ್ ಬಿಲ್ (ದುರುದ್ದೇಶಪೂರ್ವಕ ಹಣಕಾಸು ಸುಸ್ತಿದಾರರ ಮಸೂದೆ) ಎಂದು ಕರೆಯಲಾಗಿದ್ದು, ಇದರ ಜತೆಗೆ ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್ಎಎಫ್ಆರ್ಎ) ವನ್ನೂ ಸ್ಥಾಪಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದು ಆಡಿಟರ್ಗಳ ಮೇಲ್ವಿಚಾರಣೆ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಎಲ್ಲ ಲಿಸ್ಟೆಡ್ ಹಾಗೂ ಲಿಸ್ಟ್ ಆಗಿರದ ಕಂಪನಿಗಳು ಇದರ ವ್ಯಾಪ್ತಿಗೆ ಒಳಪಡಲಿವೆ. ಈ ಪ್ರಾಧಿಕಾರವು ಒಬ್ಬ ಮುಖ್ಯಸ್ಥರು ಮತ್ತು ಮೂವರು ಪೂರ್ಣಕಾಲಿಕ ಸದಸ್ಯರು ಹಾಗೂ ಓರ್ವ ಕಾರ್ಯದರ್ಶಿಯನ್ನು ಹೊಂದಿರಲಿದೆ.
ಬಜೆಟ್ ಅಧಿವೇಶನದಲ್ಲಿ ಮಂಡನೆ: ಮಸೂದೆಯನ್ನು ಕಳೆದ ನವೆಂಬರ್ನಲ್ಲೇ ಕಾನೂನು ಸಚಿವಾಲಯ ಅನುಮೋದನೆ ನೀಡಿದ್ದು, ಬಜೆಟ್ ಅಧಿವೇಶನದ 2ನೇ ಚರಣದಲ್ಲಿ ಮಂಡಿಸಲಾಗುತ್ತದೆ. ಈ ಮಸೂದೆ ಉಭಯ ಸದನಗಳಲ್ಲೂ ಸರಾಗವಾಗಿ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.
ಡಿಫಾಲ್ಟರ್ಗಳ ವಿದೇಶ ಪ್ರಯಾಣ ತಡೆಗೆ ಸೂಚನೆ
ಯಾವುದೇ ಬ್ಯಾಂಕ್ನಲ್ಲಿ ಸುಸ್ತಿದಾರರಾಗಿರುವ ಉದ್ಯಮಿಗಳನ್ನು ವಿದೇಶಕ್ಕೆ ತೆರಳಲು ವಲಸೆ ಬ್ಯೂರೋ ಅವಕಾಶ ನೀಡಬಾರದು ಎಂದು ಗೃಹ ಸಚಿವಾಲಯ ಪತ್ರ ಬರೆದಿದೆ. ಇವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಬಾರದು. ಆದರೆ ವಿದೇಶಕ್ಕೆ ತೆರಳಲು ಬಿಡಬಾರದು. ಸುಸ್ತಿದಾರರು ಕೋರ್ಟ್ನಿಂದ ಪಡೆದ ಅನುಮತಿ ಪತ್ರ ಸಲ್ಲಿಸಿದರೆ ಮಾತ್ರವೇ ವಿದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ.
1,217 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ನೀರವ್ ಮಾವ ಹಾಗೂ ಗೀತಾಂಜಲಿ ಜೆಮ್ಸ್ ಮಾಲಕ ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 1,217 ಕೋಟಿ ರೂ. ಮೌಲ್ಯದ ಸೊತ್ತನ್ನು ಜಾರಿ ನಿರ್ದೇ ಶನಾಲಯ ಗುರುವಾರ ಜಪ್ತಿ ಮಾಡಿ ಕೊಂಡಿದೆ. 15 ಫ್ಲಾಟ್ ಮತ್ತು ಮುಂಬಯಿ ಯಲ್ಲಿನ 17 ಕಚೇರಿಗಳು, ಕೋಲ್ಕತಾದಲ್ಲಿ ಒಂದು ಮಾಲ್, ಅಲಿಬಾಗ್ನಲ್ಲಿ ನಾಲ್ಕು ಎಕರೆ ಫಾರಂ ಹೌಸ್, ನಾಸಿಕ್, ನಾಗ್ಪುರ, ಪನ್ವೇಲ್ ಮತ್ತು ವಿಲ್ಲುಪುರಂನಲ್ಲಿ ಒಟ್ಟು 231 ಎಕರೆ ಭೂಮಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಜತೆಗೆ ಹೈದರಾ ಬಾದ್ನ ರಂಗಾ ರೆಡ್ಡಿ ಜಿಲ್ಲೆಯಲ್ಲಿ 170 ಎಕರೆ ಪಾರ್ಕ್ ಕೂಡ ಜಪ್ತಿ ಮಾಡಲಾಗಿದೆ.
ಯಾರ್ಯಾರಿಗೆ ಅನ್ವಯ?
ಉದ್ದೇಶಪೂರ್ವಕ ಸುಸ್ತಿದಾರರು
ಮೋಸ ಮತ್ತು ಫೋರ್ಜರಿ
ಠೇವಣಿ ಮರುಪಾವತಿ ಮಾಡದವರು, ಅಂದರೆ ಚಿಟ್ ಫಂಡ್ ವ್ಯವಹಾರಗಳಲ್ಲಿ ತೊಡಗಿಕೊಂಡು ಹೂಡಿಕೆ ಮಾಡಿದವರ ಹಣ ಮರುಪಾವತಿ ಮಾಡದವರು
ಮಸೂದೆಯ ಅನುಕೂಲ
ಸಾಲ, ಬಡ್ಡಿಯ ಮೊತ್ತಕ್ಕೆ ಸರಿಹೊಂದುವ ಆಸ್ತಿಯ ತ್ವರಿತ ಮುಟ್ಟುಗೋಲು
ಆರೋಪ ಸಾಬೀತಾದರೆ ಜಪ್ತಿ ಮಾಡಿದ ಆಸ್ತಿ ಹರಾಜು ಸರಾಗ
ಉದ್ಯಮಿಗಳು ವಿಚಾರಣೆಯಿಂದ ತಪ್ಪಿಸಿ ಕೊಳ್ಳಲು ದೇಶ ಬಿಟ್ಟು ತೆರಳದಂತೆ ತಡೆ
ಸಿವಿಲ್ ದಾವೆಗಳನ್ನು ಸುಸ್ತಿದಾರರು ಹಾಕದಂತೆ ತಡೆ
ಕಾನೂನನ್ನು ಅಣಕಿಸಲು ನಾವು ಅವಕಾಶ ನೀಡುವುದಿಲ್ಲ. ಜವಾಬ್ದಾರಿಯುತ ಸಂಸತ್ತು ನಮ್ಮದು. ಈ ಕಾನೂನಿನಿಂದ ಭಾರತದಲ್ಲಿರುವ ಉದ್ದೇಶಪೂರ್ವಕ ಸುಸ್ತಿದಾರರ ಎಲ್ಲ ಆಸ್ತಿಯನ್ನೂ ವಶಪಡಿಸಿ ಕೊಳ್ಳಬಹುದಾಗಿದೆ.
ಅರುಣ್ ಜೇಟ್ಲಿ , ವಿತ್ತ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು