ಸೇನಾ ಎನ್ ಕೌಂಟರ್ ಗೆ ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಬಲಿ
Team Udayavani, Mar 11, 2019, 5:32 AM IST
ಜಮ್ಮು-ಕಾಶ್ಮೀರ:ಪುಲ್ವಾಮಾದಲ್ಲಿ ಫೆಬ್ರುವರಿ 14ರಂದು ಸಿಆರ್ ಪಿಎಫ್ ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಸಂಚುಕೋರರಲ್ಲಿ ಒಬ್ಬನಾದ ಮುದಸ್ಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್ ಭಾಯಿ ಎಂಬ ಉಗ್ರ ಸೇನಾಪಡೆಯ ಎನ್ ಕೌಂಟರ್ ಗೆ ಬಲಿಯಾಗಿರುವುದಾಗಿ ಶಂಕಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಪುಲ್ವಾಮಾ ದಾಳಿ ಹಿಂದಿನ ಮಾಸ್ಟರ್ ಮೈಂಡ್ 23 ವರ್ಷದ ಎಲೆಕ್ಟ್ರಿಷಿಯನ್ ಮುದಸ್ಸಿರ್ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈತನ ಹತ್ಯೆಯನ್ನು ಸೇನಾ ಅಧಿಕಾರಿಗಳು ಇನ್ನಷ್ಟೇ ಖಚಿತಪಡಿಸಬೇಕಾಗಿದೆ.
ಭಾನುವಾರ ಭಾರತೀಯ ಸೇನಾಪಡೆ, ಸಿಆರ್ ಪಿಎಫ್ ಹಾಗೂ ಜಮ್ಮು-ಕಾಶ್ಮಿರ ಪೊಲೀಸರು ದಕ್ಷಿಣ ಕಾಶ್ಮೀರದ ತ್ರಾಲ್ ಪ್ರದೇಶದ ಪಿಂಗ್ಲಿಶ್ ಎಂಬಲ್ಲಿ ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದರು. ಭಾನುವಾರ 3.55ಕ್ಕೆ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ಆರಂಭವಾಗಿದ್ದು, ರಾತ್ರಿ 10.30ರವರೆಗೂ ಮುಂದುವರಿದಿತ್ತು ಎಂದು ವರದಿ ತಿಳಿಸಿದೆ.
ಮೂವರು ಉಗ್ರರು ಎನ್ ಕೌಂಟರ್ ಗೆ ಬಲಿಯಾಗಿದ್ದು, ಅವರ ಬಳಿ ಇದ್ದ ಎಕೆ 47 ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಮೂವರಲ್ಲಿ ಖಾನ್ ಮೃತದೇಹ ಕೂಡಾ ಸೇರಿದೆ ಎನ್ನಲಾಗಿದ್ದು, ಈತ ತ್ರಾಲ್ ನ ಮೀರ್ ಮೊಹಲ್ಲಾ ನಿವಾಸಿ, ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂದು ವರದಿ ವಿವರಿಸಿದೆ.