ಮೋದಿ ಪ್ರಮಾಣ ವಚನಕ್ಕೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಬರಲ್ಲ
Team Udayavani, May 30, 2019, 12:06 PM IST
ಹೊಸದಿಲ್ಲಿ : ಇಂದು ಗುರುವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿತೀಯ ಬಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಪಂಜಾಬ್ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬರುವುದಿಲ್ಲ.
ತನ್ನ ಗೈರಿಗೆ ಸಿಂಗ್ ನಿರ್ದಿಷ್ಟ ಕಾರಣ ಕೊಟ್ಟಿಲ್ಲವಾದರೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಂಡಿರುವ ದಯನೀಯ ಸೋಲೇ ಮುಖ್ಯ ಕಾರಣವೆಂದು ತಿಳಿಯಲಾಗಿದೆ.
ಮೋದಿ ಪ್ರಮಾಣ ವಚನಕ್ಕೆ ತಾನು ಹೋಗುವುದಾಗಿ ಮೊದಲು ಹೇಳಿದ್ದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನಂತರ ಉಲ್ಟಾ ಹೊಡೆದು “ನಾನು ಬರಲ್ಲ; ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಹಿಂಸೆಗೆ ಬಲಿಯಾದ 54 ಬಿಜೆಪಿ ಕಾರ್ಯಕರ್ತರ ಕುಟುಂಬದವರು ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅವರನ್ನು ಎದುರಿಸಲಾಗದ ಕಾರಣ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಾರದಿರಲು ನಿರ್ಧರಿಸಿದ್ದಾರೆ ಎಂದು ಪ.ಬಂಗಾಲದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.