ರಫೇಲ್ ಕಡತ ಕಳ್ಳತನ ಕೇಸ್ಗೆ ಆದ್ಯತೆ
Team Udayavani, Mar 15, 2019, 12:30 AM IST
ಹೊಸದಿಲ್ಲಿ: ರಫೇಲ್ ಡೀಲ್ ಕುರಿತ ತೀರ್ಪಿನ ಮರುಪರಿಶೀಲನೆ ಅರ್ಜಿಯಲ್ಲಿ ಕದ್ದ ದಾಖಲೆಗಳಿವೆ ಎಂಬ ಕೇಂದ್ರದ ಆಕ್ಷೇಪಣೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ನಂತರ ರಫೇಲ್ ಒಪ್ಪಂದದಲ್ಲಿನ ಅವ್ಯವಹಾರ ಆರೋಪದ ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಹೇಳಿದೆ. ಈ ಸಂಬಂಧ ಸರಕಾರದ ವಾದವನ್ನು ಸುಪ್ರೀಂಕೋರ್ಟ್ ಆಲಿಸಿದ್ದು, ತೀರ್ಪು ಕಾಯ್ದಿರಿಸಿದೆ. ದಾಖಲೆಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಈ ಸಂಬಂಧ ಆದೇಶ ಪ್ರಕಟಿಸಲಿದೆ.
ಈ ಬಗ್ಗೆ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಸಚಿವಾಲ ಯದ ಅನುಮತಿ ಇಲ್ಲದೇ ದಾಖಲೆಗಳನ್ನು ಸಾಕ್ಷ್ಯಗಳನ್ನಾಗಿ ಕೋರ್ಟ್ನಲ್ಲಿ ಮಂಡಿಸಲಾ ಗದು. ಈ ಪ್ರಕರಣದಲ್ಲಿ ದಾಖಲೆಗಳನ್ನು ಕಳ್ಳತನ ಮಾಡಿ ಸಲ್ಲಿಸಲಾಗಿದೆ. ಅಷ್ಟೇ ಅಲ್ಲ, ತನ್ನ ವಾದಕ್ಕೆ ಅವರು ಸಾಕ್ಷ್ಯ ಕಾಯ್ದೆಯಲ್ಲಿ ನಮೂದಿಸಿರುವ ನಿಯಮಗಳನ್ನೂ ಉಲ್ಲೇಖೀಸಿದ್ದಾರೆ.
ಆದರೆ ಇದಕ್ಕೆ ಆಕ್ಷೇಪಿಸಿದ ವಕೀಲ ಪ್ರಶಾಂತ್ ಭೂಷಣ್ ರಫೇಲ್ಗೆ ಸಂಬಂಧಿಸಿದಂತೆ ಗೌಪ್ಯ ದಾಖಲೆಗಳು ಎಂದು ಸರಕಾರ ಹೇಳುವ ದಾಖಲೆಗಳು ಈಗಾಗಲೇ ಸಾರ್ವಜನಿಕವಾಗಿವೆ. ಹೀಗಾಗಿ ಇದನ್ನು ಗೌಪ್ಯ ಎಂದು ಪರಿಗಣಿಸಲಾಗದು. ಇದೇ ವೇಳೆ, ದೂರುದಾರ ಅರುಣ್ ಶೌರಿ, ಈ ದಾಖಲೆಗಳು ಮೂಲ ದಾಖಲೆಗಳ ನಕಲು ಪ್ರತಿಗಳು ಎಂದು ಹೇಳುವ ಮೂಲಕ ಇದರ ಅಸಲಿಯತ್ತನ್ನು ಸರಕಾರವೇ ಸಾಬೀತುಪಡಿಸಿದೆ ಎಂದಿದ್ದಾರೆ. ಅಲ್ಲದೆ, ದೇಶದ ಭದ್ರತೆಗೆ ಅಪಾಯ ಒಡ್ಡಬಹುದು ಎಂದು ಸರಕಾರ ವಾದಿಸುವ ಈ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರ ಬಂದಾಗ ಸಾರ್ವಜನಿಕ ಹಿತಾಸಕ್ತಿಯೇ ಮುಖ್ಯವಾಗು ತ್ತದೆ. ಹೀಗಾಗಿ ಇದನ್ನು ನಾವು ಆರ್ಟಿಐ ಅಡಿಯಲ್ಲಿ ಪರಿಗಣಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಇದಕ್ಕೂ ಮೊದಲು, ರಫೇಲ್ಗೆ ಸಂಬಂಧಿಸಿದ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯ ಅನುಮತಿಯಿ ಲ್ಲದೇ ಯಾರೂ ಕೋರ್ಟ್ಗೆ ಸಲ್ಲಿಸುವಂತಿಲ್ಲ ಎಂದು ಅಟಾರ್ನಿ ಜನರಲ್ ವಾದಿಸಿದ್ದರು.