“ಅಪ್ಪನ ಹಂತಕರನ್ನು ಕ್ಷಮಿಸುವೆ’ ರಾಹುಲ್ ಗಾಂಧಿ
Team Udayavani, Feb 18, 2021, 8:30 AM IST
ಪುದುಚೇರಿ: “1991ರಲ್ಲಿ ನನ್ನ ಅಪ್ಪ ರಾಜೀವ್ ಗಾಂಧಿ ಹತ್ಯೆಯಾದಾಗ ನನಗಾದ ನೋವು ಅಷ್ಟಿಷ್ಟಲ್ಲ. ಹಾಗಂತ ನಾನು ಆ ಹಂತಕರ ವಿರುದ್ಧ ದ್ವೇಷ ಸಾಧಿಸುತ್ತಿಲ್ಲ. ನಾನು ಅವರನ್ನು ಕ್ಷಮಿಸುತ್ತೇನೆ’. ಹೀಗೆಂದು ಹೇಳಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಬುಧವಾರ ಪುದುಚೇರಿಗೆ ಭೇಟಿ ನೀಡಿದ್ದ ವೇಳೆ ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಗಳೊಂದಿಗೆ ರಾಹುಲ್ ಸಂವಾದ ನಡೆ ಸಿದ್ದಾರೆ. ಈ ಸಮಯದಲ್ಲಿ ವಿದ್ಯಾ ರ್ಥಿನಿಯೊಬ್ಬಳು, “ನಿಮ್ಮ ಅಪ್ಪನನ್ನು ಎಲ್ಟಿಟಿಇ ಉಗ್ರರು ಹತ್ಯೆಗೈದ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಪ್ರಶ್ನಿಸಿದಳು. ಅದಕ್ಕೆ ಉತ್ತರಿಸುತ್ತಾ ರಾಹುಲ್, “ಹಿಂಸೆಯಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ. ನಾನು ನನ್ನ ಅಪ್ಪನನ್ನು ಕಳೆದುಕೊಂಡೆ. ಹಾಗಂತ ಯಾರ ಮೇಲೂ ದ್ವೇಷವಿಲ್ಲ. ಅಪ್ಪ ಇನ್ನೂ ನನ್ನೊಳಗೇ ಜೀವಂತವಾಗಿದ್ದಾರೆ. ನನ್ನೊಂದಿಗೆ ಮಾತನಾಡುತ್ತಾರೆ. ಅವರ ಹಂತಕರನ್ನು ನಾನು ಕ್ಷಮಿಸುತ್ತೇನೆ’ ಎಂದಿದ್ದಾರೆ.
ಇದೇ ವೇಳೆ, ಟೂಲ್ ಕಿಟ್ ಪ್ರಕರಣದಲ್ಲಿ ದಿಶಾ ರವಿ ಬಂಧನ ಕುರಿತೂ ಪ್ರಸ್ತಾಪಿಸಿದ ಅವರು, “ಇತ್ತೀಚಿನ ದಿನಗಳಲ್ಲಿ ನಿಮ್ಮ ಚಿಂತನೆಗಳಿಗಾಗಿ ನಿಮ್ಮನ್ನು ಬಂಧಿಸಲಾಗುತ್ತದೆ. ಹೀಗೇ ದೇಶದ ಬಾಯಿ ಮುಚ್ಚಿಸಿದರೆ, ಜನರಿಗೆ ಮಾತನಾಡಲು ಅವಕಾಶ ನೀಡದೇ ಭಯದಲ್ಲೇ ಬದುಕುವಂತೆ ಮಾಡಿದರೆ, ದೇಶದ ಸ್ವರೂಪವನ್ನೇ ನಾಶ ಮಾಡಿದಂತೆ. ಈ ಮಾತನ್ನು ಹೇಳಿದ್ದಕ್ಕೆ ನಾಳೆ ನನ್ನನ್ನೂ ಬಂಧಿಸಬಹುದು’ ಎಂದಿದ್ದಾರೆ.
ಮೀನುಗಾರಿಕೆಗೂ ಬರುವೆ: ಇದಕ್ಕೂ ಮುನ್ನ ಪುದುಚೇರಿಯ ಮೀನುಗಾರ ಸಮುದಾಯದವರ ಜತೆಯೂ ರಾಹುಲ್ ಮಾತುಕತೆ ನಡೆಸಿ ದರು. ನಾನು ಇನ್ನೊಮ್ಮೆ ನಿಮ್ಮೊಂದಿಗೆ ಮೀನುಗಾರಿಕೆಗೆ ಬರುತ್ತೇನೆ. ಆಗ ನಿಮ್ಮ ಜೀವನಶೈಲಿ ಕುರಿತು ಅರಿಯಲು ಸಾಧ್ಯವಾಗುತ್ತದೆ. ಎಲ್ಲವನ್ನೂ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಅನುಭವಿಸಿದರಷ್ಟೇ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದೂ ರಾಹುಲ್ ಹೇಳಿದರು.