ಇಂದು ಕಣಿವೆ ರಾಜ್ಯಕ್ಕೆ ರಾಹುಲ್?
Team Udayavani, Aug 24, 2019, 5:33 AM IST
ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳ ನಾಯಕರು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ. ಕಾಂಗ್ರೆಸ್, ಸಿಪಿಎಂ, ಸಿಪಿಐ, ಆರ್ಜೆಡಿ, ಎನ್ಸಿಪಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳ ನಿಯೋಗವು ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಈ ನಿಯೋಗದಲ್ಲಿ ಇರಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ರಾಹುಲ್ ನಡುವೆ ಕಣಿವೆ ರಾಜ್ಯ ಭೇಟಿಗೆ ಸಂಬಂಧಿಸಿ ವಾಕ್ಸಮರ ನಡೆದಿತ್ತು. ರಾಜ್ಯದ ಪರಿಸ್ಥಿತಿ ಅವಲೋಕಿಸಲು ರಾಹುಲ್ಗೆ ಕಾಪ್ಟರ್ ಕಳುಹಿಸಿಕೊಡುವುದಾಗಿಯೂ ರಾಜ್ಯಪಾಲರು ಹೇಳಿದ್ದರು.
ಮತ್ತೆ ನಿರ್ಬಂಧ: ವಿಶ್ವಸಂಸ್ಥೆಯ ಸ್ಥಳೀಯ ಸೇನಾ ವೀಕ್ಷಣಾಲಯದ ಕಚೇರಿಗೆ ಮುತ್ತಿಗೆ ಹಾಕುವಂತೆ ಪ್ರತ್ಯೇಕತಾವಾದಿಗಳು ಶ್ರೀನಗರದಾದ್ಯಂತ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಶ್ರೀನಗರದಲ್ಲಿ ಮತ್ತೆ ನಿರ್ಬಂಧ ಹೇರಲಾಗಿದೆ. ಇನ್ನು, ಶುಕ್ರವಾರದ ಪ್ರಾರ್ಥನೆಯ ಬಳಿಕ ಕೆಲವು ಕಡೆ ಪ್ರತಿಭಟನೆಗಳು ನಡೆದಿದೆಯಾದರೂ, ಕಣಿವೆ ರಾಜ್ಯ ಬಹುತೇಕ ಶಾಂತಿಯುತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕರ್ತಾರ್ಪುರ ಕಾರಿಡಾರ್ ವಿಚಾರದಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.