ರಾಹುಲ್ ರಾಜೀನಾಮೆ ನಿರ್ಧಾರ ಅಚಲ?
Team Udayavani, May 28, 2019, 6:00 AM IST
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತನ್ನ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಪಕ್ಷದ ಚುಕ್ಕಾಣಿಯನ್ನು ಬೇರೆಯವರಿಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿರುವ ಅವರು, ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕರಿಗೆ ಈ ಕುರಿತಂತೆ ಕಾರ್ಯೋನ್ಮುಖರಾಗಲು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಚುನಾವಣ ಫಲಿತಾಂಶದ ಬಳಿಕ ಪಕ್ಷದ ಅಧಿಕೃತ ಕಾರ್ಯ ಕ್ರಮಗಳಿಂದ ಅವರು ದೂರ ಉಳಿಯಲಾರಂಭಿಸಿರುವುದೂ ಈ ವದಂತಿಗಳಿಗೆ ಪುಷ್ಟಿ ನೀಡಿದೆ. ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸಂಸದರ ಸಭೆಗೆ ಹಾಜರಾಗಲು ಅವರು ನಿರಾಕರಿಸಿದ್ದು, ಅವರ ಉಪಸ್ಥಿತಿಯಲ್ಲಿ ನಡೆಯಬೇಕಿದ್ದ ಪಕ್ಷದ ಹಲವು ಕಾರ್ಯಕ್ರಮಗಳು ಹಾಗೂ ಸಭೆಗಳು ರದ್ದಾಗಿವೆ ಎಂದು ಹೇಳಲಾಗಿದೆ.
ಫಲಿತಾಂಶ ಬಂದ ಬಳಿಕ ರಾಹುಲ್ ಅಧ್ಯಕ್ಷಗಿರಿ ತ್ಯಜಿಸುವ ಪ್ರಸ್ತಾವನೆಯನ್ನು ಪಕ್ಷದ ಕಾರ್ಯ ಕಾರಿಣಿ (ಸಿಡಬ್ಲ್ಯುಸಿ) ಮುಂದಿಟ್ಟಿದ್ದರು. ಆದರೆ ಅದನ್ನು ಸಿಡಬ್ಲ್ಯುಸಿ ತಿರಸ್ಕರಿ ಸಿದ್ದರಲ್ಲದೆ, ರಾಹುಲ್ ಅವರೇ ಪಕ್ಷವನ್ನು ಮುನ್ನಡೆಸಬೇಕೆಂದು ಸೂಚಿಸಿದ್ದರು. ಆದರೆ ರಾಹುಲ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎನ್ನಲಾಗಿದೆ.
ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬೇಕಿಲ್ಲ
ಅವರ ಈ ನಿರ್ಧಾರವನ್ನು ಬದಲಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ಸಿನ ಹಿರಿಯ ನಾಯಕರು ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ. ಹಾಗಾಗಿಯೇ, ಸಿಡಬ್ಲ್ಯುಸಿ ಸಭೆಯಲ್ಲಿ ಪರ್ಯಾಯ ನಾಯಕರನ್ನು ಹುಡುಕುವಂತೆ ಸೂಚಿಸಿದ್ದ ರಾಹುಲ್, ಕಾಂಗ್ರೆಸ್ಸಿಗೆ ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಬೇಕೆಂದೇನೂ ಇಲ್ಲ ಎಂದಿದ್ದರು. ಆಗ, ರಾಹುಲ್ಗೆ ಅವರಿಗೆ ಪರ್ಯಾ ಯವಾಗಿ ಪ್ರಿಯಾಂಕಾ ಅವರ ಹೆಸರು ಪ್ರಸ್ತಾವವಾದಾಗ, “ದಯವಿಟ್ಟು ನನ್ನ ತಂಗಿ ಯನ್ನು ಇದರೊಳಗೆ ಎಳೆದು ತರಬೇಡಿ’ ಎಂದು ಕೇಳಿಕೊಂಡರೆಂದು ಮೂಲ ಗಳು ತಿಳಿಸಿವೆ.
ಮಾಧ್ಯಮಗಳಿಗೆ ಮನವಿ
ಮಾಧ್ಯಮಗಳಿಗೆ ಮನವಿ ಮಾಡಿರುವ ಕಾಂಗ್ರೆಸ್, ಮುಚ್ಚಿದ ಕೊಠಡಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯ ನಿರ್ಧಾರಗಳಿಗೆ ಗೌರವ ನೀಡಬೇಕು. ಸಭೆಯಲ್ಲಿ ನಡೆದಿರುವ ವಿಚಾರಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ. ಜತೆಗೆ ದಯವಿಟ್ಟು ವದಂತಿಗಳನ್ನು ಹಬ್ಬಿಸದಂತೆ ಕೋರಿದೆ.
ಮತ್ತೆ ಮೂವರು ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ
ಲೋಕಸಭೆ ಚುನಾವಣೆಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಸೋಮವಾರ ಕಾಂಗ್ರೆಸ್ನ ಮೂವರು ರಾಜ್ಯ ಘಟಕದ ಅಧ್ಯಕ್ಷರು ಪಕ್ಷದ ಅಧ್ಯಕ್ಷ ರಾಹುಲ್ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಮೂಲಕ ಫಲಿತಾಂಶದ ಬಳಿಕ ರಾಜೀನಾಮೆ ನೀಡಿದವರ ಸಂಖ್ಯೆ 6ಕ್ಕೇರಿದಂತಾಗಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಾಖರ್, ಜಾರ್ಖಂಡ್ನ ಅಜಯ್ ರಾಯ್ ಮತ್ತು ಅಸ್ಸಾಂ ಘಟಕದ ಅಧ್ಯಕ್ಷ ರಿಪುನ್ ಬೋರಾ ಅವರೇ ನೈತಿಕ ಹೊಣೆ ಹೊತ್ತು ಸೋಮವಾರ ರಾಜೀನಾಮೆ ನೀಡಿದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ